ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಮಳೆ ಇಲ್ಲದೆ ಭೀಕರ ಬರಗಾಲ ಆವರಿಸಿದೆ. ಈ ವರ್ಷವೂ ಮುಂಗಾರು ಕೈಕೊಡುವ ಸಾಧ್ಯತೆಗಳು ಕಾಣುತ್ತಿದ್ದು, ಜಿಲ್ಲೆಯಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಈ ಮಧ್ಯೆ ಮಳೆರಾಯ ಊರಿಗೆ ಬರಲೆಂದು ಪುಟಾಣಿ ಮಕ್ಕಳು ಕೂಡ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇವದುರ್ಗದ ಜಾಲಹಳ್ಳಿಯಲ್ಲಿ ಪುಟ್ಟ ಮಕ್ಕಳು ಮಳೆಗಾಗಿ ನೂತನ ರೀತಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಮಿಂಚಿನಂತೆ ಮಳೆರಾಯ ಭೂಮಿಗೆ ಅಪ್ಪಳಿಸಲಿ ಅಂತ ಮನೆ ಮನೆಗೆ ತೆರಳಿ ಹಾಡು ಹೇಳುತ್ತ ಬೇಸಿಗೆಯ ಬೇಗೆಯಲ್ಲಿ ಮೈಮೇಲೆ ನೀರು ಹಾಕಿಕೊಂಡು ಮಕ್ಕಳು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಹಾಗೆಯೇ ಸ್ಥಳೀಯರು ಮಕ್ಕಳಿಗೆ ಸಾಥ್ ನೀಡಿ ಕಪ್ಪೆಗಳಿಗೆ ಮದುವೆ ಮಾಡಿ ಮಳೆರಾಯನಿಗೆ ಮನವಿ ಮಾಡಿದ್ದಾರೆ.
ಈ ವರ್ಷ ಉತ್ತಮ ಮಳೆ ಆಗಲೆಂದು ನಗರದ ಗ್ಲೋಬಲ್ ವಿಜನ್ ಪಬ್ಲಿಕ್ ಶಾಲೆಯ ಪುಟ್ಟ ಮಕ್ಕಳು ದೇವರಿಗೆ ಪ್ರಾರ್ಥನೆ ಸಲ್ಲಿದ್ದಾರೆ. ಸ್ಕೂಲ್ನಲ್ಲಿ ಶಿವನ ಫೋಟೊಗೆ ವಿಶೇಷ ಪೂಜೆ ಸಲ್ಲಿಸಿ, ಓಂ ನಮಃ ಶಿವಾಯ ಶಿವನಾಮ ಜಪಿಸುತ್ತ ಪುಟ್ಟ ಪುಟ್ಟ ಮಕ್ಕಳು ಮಳೆರಾಯನಲ್ಲಿ ತಮ್ಮ ಊರಿಗೆ ಮಳೆ ಸುರಿಸುವಂತೆ ಮನವಿ ಮಾಡಿದ್ದಾರೆ.
ಮಳೆ ಬೆಳೆ ಇಲ್ಲದೆ ಜಿಲ್ಲೆಯ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದ್ದಾರೆ. ಈ ವರ್ಷವಾದರೂ ಉತ್ತಮ ಮಳೆ ಆಗುತ್ತೆ ಅನ್ನೋ ಭರವಸೆಯಲ್ಲಿ ರೈತರು ಇದ್ದರು. ಆದರೆ ಪ್ರಸಕ್ತ ವರ್ಷವೂ ಕೂಡ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿ 15 ದಿನಗಳು ಕಳೆದರೂ ಜಿಲ್ಲೆಯಲ್ಲಿ ಮಾತ್ರ ಮಳೆಯಾಗಿಲ್ಲ. ಇನ್ನೂ ಮಳೆ ಆಗದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ಚಿಕ್ಕಮಕ್ಕಳು ಸಹ ಮಳೆಗಾಗಿ ಪೂಜೆ ಮಾಡುತ್ತಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]