ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ ಮಗು ಆರೋಗ್ಯವಾಗಿ ಇಂದು ಡಿಸ್ಚಾರ್ಜ್ ಆಗಿದೆ.
ಮಗು ಸೈಫುಲ್ ಅಝ್ಮಾನ್ನ ಓಪನ್ ಹಾರ್ಟ್ ಸರ್ಜರಿ ಮಾಡುವಲ್ಲಿ ಯಶಸ್ವಿಯಾಗಿರುವ ಜಯದೇವ ಆಸ್ಪತ್ರೆಯ ವೈದ್ಯರ ತಂಡ ಇಂದು ಮಗು ಹಾಗೂ ಪೋಷಕರನ್ನು ಇಂದು ಆತ್ಮೀಯವಾಗಿ ಆಸ್ಪತ್ರೆಯಿಂದ ಕಳುಹಿಸಿದರು. ಇದನ್ನೂ ಓದಿ: ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ
ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್, ಫೆಬ್ರವರಿ 6ರಂದು 40 ದಿನದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. 7ರಂದು 12 ಜನರ ವೈದ್ಯರ ತಂಡದಿಂದ ಆಪರೇಷನ್ ಮಾಡಲಾಯಿತು. ಬಹಳ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಆಪರೇಷನ್ ಮಾಡಲಾಗಿತ್ತು. ಮಗುವಿನ ಹೃದಯದ ಎಡಭಾಗಕ್ಕೆ 4 ರಕ್ತನಾಳಗಳು ಕನೆಕ್ಟ್ ಆಗಬೇಕಿತ್ತು. ಆದರೆ ಬಲಭಾಗಕ್ಕೆ ಕನೆಕ್ಟ್ ಆಗಿತ್ತು. ಹೀಗಾಗಿ ಈ ಚಿಕಿತ್ಸೆ ಸವಾಲಾಗಿತ್ತು. ಆದರೆ ನಮ್ಮ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ. ಮಗು ಕೂಡ ಆರೋಗ್ಯವಾಗಿದೆ ಎಂದರು.
ಮಗುವಿನ ಚಿಕಿತ್ಸೆಗೆ ಒಂದೂವರೆ ಲಕ್ಷ ರೂ. ಖರ್ಚಾಗಿದೆ. ಇದರಲ್ಲಿ ಬಿಪಿಎಲ್ ಕ್ಯಾಟಗರಿಯಿಂದ 1,20,000 ಬಿಪಿಎಲ್ ಕ್ಯಾಟಗರಿಯಿಂದ ಸಿಕ್ಕಿದೆ. ಉಳಿದ ಹಣವನ್ನು ಜಯದೇವ ಆಸ್ಪತ್ರೆಯ ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದೆ. ಮಗುವಿನ ಶಸ್ತ್ರಚಿಕಿತ್ಸೆಯ ಖರ್ಚು ಸಂಪೂರ್ಣವಾಗಿ ಉಚಿತವಾಗಿದ್ದು, ಪೋಷಕರು ಈ ಚಿಕಿತ್ಸೆಯಿಂದ ಖುಷಿಯಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಮಗುವಿನ ಪೋಷಕರು, ಮಂಗಳೂರಿಂದ ಬೆಂಗಳೂರಿಗೆ ಕರೆದುಕೊಂಡು ಬರುವಾಗ ಮಗುವಿನ ಜೀವದ ಮೇಲೆ ಆಸೆ ಕೈ ಬಿಟ್ಟಿದ್ದೇವು. ಆದರೆ ವೈದ್ಯರು ನಮ್ಮ ಮಗುವನ್ನು ಉಳಿಸಿದ್ದಾರೆ. ತುಂಬಾ ಖುಷಿಯಾಗುತ್ತಿದೆ. ವೈದ್ಯರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆಯೇ ಎಂದು ವೈದ್ಯರ ಕಾರ್ಯವನ್ನ ಶ್ಲಾಘಿಸಿದರು.