ಮುಂಬೈ: ನಾಲ್ಕು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಆರೋಪಿಯನ್ನು ಊರಿನ ಬೀದಿಗಳಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ.
ಮಹಾರಾಷ್ಟ್ರದ ನಾಗ್ಪುರದ ಪರ್ದಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ಜವಾಹರ್ ವೈದ್ಯ(35) ಭಾನುವಾರ ಸಂಜೆ ನಾಲ್ಕು ವರ್ಷದ ಬಾಲಕಿ ಮೇಲೆ ಅವಳ ಮನೆಯಲ್ಲಿಯೇ ಅತ್ಯಾಚಾರ ಎಸಗಿದ್ದ. ಆಗ ಆತ ಸ್ಥಳೀಯರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ನಂತರ ಆತನನ್ನು ಶಿಕ್ಷೆಗೆ ಗುರಿಪಡಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಊರಿನಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಕ್ಕಿಬಿದ್ದ ನಂತರ ಆರೋಪಿಯನ್ನು ಸ್ಥಳೀಯರು ಮನಬಂದಂತೆ ಥಳಿಸಿದ್ದು, ನಂತರ ಹಗ್ಗದಿಂದ ಆತನ ಕೈಗಳನ್ನು ಕಟ್ಟಿ ಬೆತ್ತಲೆಯಾಗಿ ಊರಿನ ತುಂಬೆಲ್ಲ ಮೆರವಣಿಗೆ ಮಾಡಿದ್ದಾರೆ. ಆ ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಜವಾಹರ್ ವೈದ್ಯ ಸಹಕಾರಿ ಸಂಘದ ಬ್ಯಾಂಕಿನಲ್ಲಿ ಹಣ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾನೆ. ಹಣ ಸಂಗ್ರಹಿಸಲು ಪ್ರತಿ ದಿನ ವಿದ್ಯಾರ್ಥಿನಿಯ ಮನೆಗೆ ತೆರಳುತ್ತಿದ್ದ. ಭಾನುವಾರ ಸಂಜೆ ವೇಳೆ ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದದ್ದನ್ನು ಕಂಡು ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಬಾಲಕಿಯ ತಾಯಿ ಮನೆಗೆ ಮರಳಿದ್ದು, ಸಹಾಯಕ್ಕೆ ಬರುವಂತೆ ಜೋರಾಗಿ ಕಿರುಚಿದ್ದಾರೆ. ಆಗ ನೆರೆಹೊರೆಯವರು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುದ್ದಿ ಹಬ್ಬಿದ ನಂತರ ಹೆಚ್ಚು ಜನ ಜಮಾವಣೆಗೊಂಡಿದ್ದು, ನಂತರ ಸ್ಥಳೀಯರೆಲ್ಲ ಸೇರಿ ಜವಾಹರ್ ವೈದ್ಯನನ್ನು ಮನಬಂದಂತೆ ಥಳಿಸಿ, ಬೀದಿಗಳಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ) ಹಾಗೂ ಐಪಿಸಿ ಸೆಕ್ಷನ್ನ ವಿವಿಧ ಕಾಯ್ದೆಗಳಡಿ ಪರ್ದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.