ಲಕ್ನೋ: ವ್ಯಕ್ತಿಯೊಬ್ಬ ಮಗುವಿಗೆ ಎದೆ ಹಾಲುಣಿಸಲು ನಿರಾಕರಿಸಿದ್ದಕ್ಕೆ ಕೋಪಗೊಂಡು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾಲ್ಪರ್ ಜಿಲ್ಲೆಯಲ್ಲಿ ನಡೆದಿದೆ.
ಬಿಥೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೂಜಾ (21) ಮೃತ ಮಹಿಳೆ. ಆರೋಪಿ ಮಹೇಂದ್ರ, ಪೂಜಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜಾ ತನ್ನ ನಾಲ್ಕು ತಿಂಗಳ ಮಗುವಿಗೆ ಹಾಲುಣಿಸಲು ನಿರಾಕರಿಸಿದ್ದಾಳೆ. ನಂತರ ಇದೇ ವಿಚಾರಕ್ಕೆ ಪತಿ ಮಹೇಂದ್ರ, ಪೂಜಾಳ ಜೊತೆ ಜಗಳ ಮಾಡಿದ್ದಾನೆ. ಆದರೂ ಪೂಜಾ ಮಗುವಿಗೆ ಹಾಲಣಿಸಲು ನಿರಾಕರಿಸಿದ್ದಾಳೆ. ಆಗ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಮಹೇಂದ್ರ ಪತ್ನಿಗೆ ಥಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಹೇಳಿದರು.
ಅಷ್ಟೇ ಅಲ್ಲದೇ ಪತ್ನಿ ಪೂಜಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಆರೋಪಿ ಮಹೇಂದ್ರನನ್ನು ಬಂಧಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದರು.