ವಿಜಯಪುರ: ಮನೆಯಲ್ಲಿ ಮಲಗಿದ್ದ ವೇಳೆ ಮಗುವಿಗೆ ಹೆಗ್ಗಣ ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹೊಸೂರ ಗ್ರಾಮದಲ್ಲಿ ನಡೆದಿದೆ.
ಗೀತಾ-ಗೋಲಪ್ಪ ದಂಪತಿಯ ಆರು ತಿಂಗಳ ಕೂಸು ಸಾವನ್ನಪ್ಪಿದೆ. ಗೀತಾ-ಗೋಳಪ್ಪ ದಂಪತಿ ಮೂಲತಃ ಸಿಂದಗಿ ತಾಲೂಕಿನ ಸುರಗಿಹಳ್ಳಿ ನಿವಾಸಿಗಳು. ಹಬ್ಬಕ್ಕೆಂದು ಪತಿ ಹಾಗೂ ಮಗುವಿನೊಂದಿಗೆ ತವರು ಮನೆಗೆ ಗೀತಾ ಬಂದಾಗ ಈ ಘಟನೆ ನಡೆದಿದೆ.
ಆರು ತಿಂಗಳ ಗಂಡು ಮಗುವನ್ನು ರಾತ್ರಿ ಪೋಷಕರು ತಮ್ಮ ಪಕ್ಕದಲ್ಲೇ ಮಲಗಿಸಿಕೊಂಡಿದ್ದರು. ಈ ವೇಳೆ ಹೆಗ್ಗಣ ಮಗುವಿನ ಕಾಲನ್ನು ಎಳೆದಾಡಿ ಬಲಗಾಲಿಗೆ ಕಚ್ಚಿದೆ. ಸ್ವಲ್ಪ ಸಮಯದ ನಂತರ ಪೋಷಕರು ಎದ್ದು ಮಗುವನ್ನು ನೋಡಿದ್ದಾರೆ. ಆದರೆ ಅಷ್ಟರಲ್ಲೇ ಮಗು ಸಾವನ್ನಪ್ಪಿದೆ. ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಹೆಗ್ಗಣ ಕಚ್ಚಿದ ಪರಿಣಾಮ ಮಗು ಹೆದರಿ ಉಸಿರುಗಟ್ಟಿ ಸಾವನ್ನಪ್ಪಿದೆ ಎನ್ನಲಾಗುತ್ತಿದೆ. ಕಲಕೇರಿ ಪೊಲೀಸ್ ಠಾಣಾ ವ್ಶಾಪ್ತಿಯಲ್ಲಿ ಈ ಘಟನೆ ನಡೆದಿದೆ.