ಚಿಕ್ಕಮಗಳೂರು: ಕಳೆದ ಹದಿನೈದು ದಿನಗಳಿಂದ ಕಾಫಿನಾಡಿನ ಮಲೆನಾಡು ಭಾಗ ಸೇರಿದಂತೆ ಜಿಲ್ಲಾದ್ಯಂತ ದಿನಬಿಟ್ಟು ದಿನ ಸುರಿಯುತ್ತಿರುವ ರೇವತಿ ಮಳೆಯ ಅಬ್ಬರಕ್ಕೆ ಕಾಫಿನಾಡಿಗರು ಆತಂಕಕ್ಕೀಡಾಗಿದ್ದಾರೆ.
ಇಂದು ಕೂಡ ತಾಲೂಕಿನ ಬಯಲುಸೀಮೆ ಬೆಳವಾಡಿ ಭಾಗದಲ್ಲಿ ಸುಮಾರು ಅರ್ಧ ಗಂಟೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಗಾಳಿಯೊಂದಿಗೆ ಸುರಿದ ವರುಣ ಅಬ್ಬರಕ್ಕೆ ರಂಗಮಂದಿರದ ಕಬ್ಬಿಣ ಮೇಲ್ಛಾವಣಿ ಸಂಪೂರ್ಣ ಹಾರಿ ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಮನೆ ಭಾಗಶಃ ಜಖಂಗೊಂಡಿದೆ.
ಮೇಲ್ಛಾವಣಿ ಹಾರಿ ಬೀಳುತ್ತಿದ್ದಂತೆ ಹಂಚಿನ ಮನೆಯ ಮೇಲ್ಛಾವಣಿ ಕೂಡ ಬಹುತೇಕ ಹಾನಿಯಾಗಿ. ಹೀಗಾಗಿ ಮಳೆ ನೀರು ಮನೆಯೊಳಗೆ ಹರಿದು ಹೋಗಿದೆ. ಮನೆಯಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ. ಮನೆಯ ಹಿರಿಯ 65 ವರ್ಷದ ಚನ್ನೇಗೌಡ ಎಂಬವರ ಬಲಗೈಗೆ ತೀವ್ರ ಪೆಟ್ಟಾಗಿದೆ. ಇದ್ದೊಂದು ಸೂರು ಗಾಳಿ-ಮಳೆಗೆ ಹಾನಿಯಾಗಿದ್ದರಿಂದ ಕುಟುಂಬದ ಸದಸ್ಯರು ಆತಂಕಕ್ಕೀಡಾಗಿ, ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಆಗಿಂದಾಗ್ಗೆ ಸುರಿಯುತ್ತಿರೋ ಮಳೆಯಿಂದ ಅಲ್ಲಲ್ಲೇ ಮರಗಳು ರಸ್ತೆಗೆ ಉರುಳಿ ಬೀಳುತ್ತಿದ್ದರೆ. ಬೀದಿ ಬದಿಯ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ. ಒಂದಡೆ ಕೊರೊನಾ ಆತಂಕ ಮತ್ತೊಂದೆಡೆ ಮಳೆ ಭಯದಿಂದ ಮಲೆನಾಡಿಗರು ಆತಂಕದಲ್ಲೇ ಬದುಕುವಂತಾಗಿದೆ.