– ಓರ್ವನ ದೇಹ ಛಿದ್ರ ಛಿದ್ರ, ಸ್ಥಳದಲ್ಲೇ ಮೃತದೇಹವಿಟ್ಟು ಪ್ರತಿಭಟನೆ
– ಪೊಲೀಸರಿಂದ ಲಘು ಲಾಠಿಜಾರ್ಜ್
ಚಿಕ್ಕಮಗಳೂರು: ಪೊಲೀಸರ ಲಾಠಿಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಎದುರಿಗೆ ಬರುತ್ತಿದ್ದ ಟಿಪ್ಪರ್ಗೆ ಬೈಕ್ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಹುಣಸಹಳ್ಳಿ ಗ್ರಾಮದ ಶನಿದೇವರ ದೇವಾಲಯದ ಬಳಿ ನಡೆದಿದೆ.
ಮೃತರನ್ನ 35 ವರ್ಷದ ಮೋಹನ್ ಹಾಗೂ 25 ವರ್ಷದ ಕುಮಾರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಕೂಡ ಶಿವಮೊಗ್ಗದ ನವಿಲೆ ಗ್ರಾಮದವರಾಗಿದ್ದಾರೆ. ಶಿವಮೊಗ್ಗದ ಪ್ರತಿಷ್ಠಿತ ಮಾರಿ ಜಾತ್ರೆಗೆ ಸಂಬಂಧಿಗಳನ್ನು ಆಹ್ವಾನಿಸಲು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಶಿವಮೊಗ್ಗದಿಂದ ಬೈಕಿನಲ್ಲಿ ಲಕ್ಕವಳ್ಳಿಗೆ ಬರುತ್ತಿದ್ದ ಯುವಕರು ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ. ಲಕ್ಕವಳ್ಳಿಯ ಭದ್ರಾ ಜಲಾಶಯದ ಬಳಿಕ ಪೊಲೀಸರು ಗಾಡಿಗಳನ್ನು ತಪಾಸಣೆ ಮಾಡುತ್ತಿದ್ದರು. ಆಗ ಪೊಲೀಸರ ಜೊತೆ ಇದ್ದ ಹೋಂ ಗಾರ್ಡ್ ಬೈಕ್ ನಿಲ್ಲಿಸುವಂತೆ ಇವರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿಯಿಂದ ತಪ್ಪಿಸಿಕೊಲ್ಳುವ ಆತುರದಲ್ಲಿ ಮುನ್ನುಗಿದಾಗ ಎದುರಿಗೆ ಬಂದ ಟಿಪ್ಪರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ದೇಹ ಛಿದ್ರ ಛಿದ್ರವಾಗಿದೆ.
ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೇ ಮೃತದೇಹ ತೆಗೆಯದಂತೆ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದಿಂದ ಬಂದ ನೂರಕ್ಕೂ ಹೆಚ್ಚು ಜನ ಪೊಲೀಸರ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಬರುವಂತೆ ಆಗ್ರಹಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಮೃತದೇಹವನ್ನು ಮೇಲೆತ್ತಲು ಬಿಡದೆ ಆಕ್ರೋಶ ಹೊರಹಾಕಿದ್ದಾರೆ.
ಜನ ಪ್ರತಿಭಟನೆಯಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆದ ಪರಿಣಾಮ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಪ್ರತಿಭಟನಾನಿರತರನ್ನು ಚದುರಿಸಿದ್ದಾರೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.