ಚಿಕ್ಕಮಗಳೂರು: ದರಿದ್ರದ ಮೂಲವೇ ಸಿದ್ದರಾಮಯ್ಯ. ಜನ ಇಂದು ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ ಅಂದರೆ, ಅದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಸಚಿವ ಸಿ.ಟಿ.ರವಿ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಪ್ರಭೋದಿನಿ ಗುರುಕುಲದ ಅರ್ಧಮಂಡಲೋತ್ಸವದಲ್ಲಿ ಮಾತನಾಡಿದ ಅವರು, ಸಿದ್ದು ಸರ್ಕಾರದಲ್ಲಿ 11 ಲಕ್ಷ ಮನೆಗೆ ಮಂಜೂರಾತಿ ನೀಡಲಾಗಿತ್ತು. ಹಣ ಇಡದೆ ಮನೆಗಳನ್ನ ಮಂಜೂರಾತಿ ಮಾಡಿದರಿಂದ ಮನೆಗಳು ಅರ್ಧಕ್ಕೆ ನಿಂತಿವೆ. ಹಣ ಇಟ್ಟಿದ್ದರೆ ಇಂದು ಮನೆಗಳು ಅರ್ಧಕ್ಕೆ ನಿಲ್ಲುತ್ತಿರಲಿಲ್ಲ. ಜನ ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿರಲಿಲ್ಲ. ಚುನಾವಣೆ ವರ್ಷವೆಂದು ವರ್ಷಕ್ಕೆ 2-3 ಲಕ್ಷ ಮನೆಗೆ ಮಂಜೂರಾತಿ ಮಾಡಿದ್ದರಿಂದ ಇವತ್ತು ಜನ ಕಣ್ಣೀರು ಹಾಕುತ್ತಿದ್ದಾರೆ ಎಂದು ಸಿದ್ದು ವಿರುದ್ಧ ಕಿಡಿ ಕಾರಿದ್ದಾರೆ.
ಆರ್.ಎಸ್.ಎಸ್ ಪಥಸಂಚಲನದ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಅವರು ಹಲವು ಬಾರಿ ಸದನದಲ್ಲಿ ನಾನೂ ಸ್ವಯಂ ಸೇವಕನೆಂದು ಪರಿಚಯಿಸಿಕೊಂಡಿದ್ದರು. ನಾನೂ ಸಂಘದ ಪ್ರಾರ್ಥನೆ ಹೇಳುತ್ತೇನೆ. ರವಿ ನಿನಗೆ ಪ್ರಾರ್ಥನೆ ಬರುತ್ತಾ, ನಾನ್ ಹೇಳ್ತೀನಿ ಎನ್ನುತ್ತಿದ್ದರು. ಸ್ವಯಂಸೇವಕದ ಭಾವನೆ ಇದ್ರೆ ಅವರು ಒಳ್ಳೆಯದ್ದನ್ನೇ ಬಯಸುತ್ತಾರೆ ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.