ಚಿಕ್ಕೋಡಿ: ಡಿ.29 ರಂದು ಆಚರಿಸಬೇಕಾದ ವಿಶ್ವಮಾನವ ದಿನಾಚರಣೆಯನ್ನು ಇಂದೇ ಆಚರಿಸಿದ ಶಿಕ್ಷಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ವಿಶ್ವ ಮಾನವ ದಿನಾಚರಣೆ ಆಚರಣೆ ಮಾಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ ನಾಳೆ ಭಾನುವಾರ ರಜೆ ಇರುವುದರಿಂದ ಇಂದೇ ಕುವೆಂಪು ಅವರ ಫೋಟೋಗೆ ಪೂಜೆ ಸಲ್ಲಿಸಿ ವಿಶ್ವಮಾನವ ಹಕ್ಕುಗಳ ದಿನಾಚರಣೆ ಆಚರಿಸಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುಳವಾಡ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ನಾಳೆ ಆಚರಿಸಬೇಕಿದ್ದ ವಿಶ್ವಮಾನವ ದಿನಾಚರಣೆಯನ್ನು ಶಾಲೆಯ ಬೋರ್ಡ್ ಮೇಲೆ ನಾಳೆಯ ದಿನಾಂಕವನ್ನು ನಮೂದಿಸಿ ಶಾಲಾ ಮಕ್ಕಳೊಂದಿಗೆ ಶಿಕ್ಷಕ ಕೆ.ಆರ್.ಕಂಬಾರ ಆಚರಣೆ ಮಾಡಿದ್ದು, ಸರ್ಕಾರಿ ಆದೇಶವಿದ್ದರೂ ಸಹ ಒಂದು ದಿನ ಮುನ್ನವೇ ದಿನಾಚರಣೆ ಆಚರಿಸಿದ್ದಾರೆ.
ಡಿ.29 ರಂದು ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳಿಗೆ ನೀಡಲಾಗಿದ್ದ ಭಾನುವಾರದ ರಜೆಯನ್ನು ರದ್ದು ಪಡಿಸಲಾಗಿದ್ದು, ಆದರೆ ಶಾಲೆಗೆ ಬರಬೇಕು ಎಂಬ ಕಾರಣದಿಂದ ಶಿಕ್ಷಕ ಇಂದೇ ದಿನಾಚರಣೆಯನ್ನು ಆಚರಿಸಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಕಾರಣ ಶಿಕ್ಷಕರ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.