-ನನ್ನ ಯೋಗ್ಯತೆಗೆ ಸಿಎಂ ಸ್ಥಾನ ಸಿಗಲೇಬೇಕು
-ಹೆಂಡ್ತಿ ಜೊತೆಯೇ ಮುನಿಸಿಕೊಳ್ಳಲ್ಲ, ಬಿಎಸ್ವೈ ಜೊತೆ ಮುನಿಸಿಕೊಳ್ತೀನಾ?
ಬೆಳಗಾವಿ/ಚಿಕ್ಕೋಡಿ: ಸೋತವರನ್ನು ಸಚಿವರನ್ನಾಗಿ ಮಾಡುವುದು ಸರಿಯಲ್ಲ. ಸೋತವರಿಗೆ ಮಂತ್ರಿ ಸ್ಥಾನ ಕೊಡಬಾರದು. ಸೋತವರಿಗೆ ಸಚಿವ ಸ್ಥಾನ ಕೊಡುವದಾದರೆ ಚುನಾವಣೆ ಯಾಕೆ ಬೇಕು ಎಂದು ಹುಕ್ಕೇರಿ ಶಾಸಕ ಹಾಗೂ ಬಿಜೆಪಿ ಮುಖಂಡ ಉಮೇಶ್ ಕತ್ತಿ ಪ್ರಶ್ನಿಸಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋತವರಿಗೆ ಸಚಿವ ಸ್ಥಾನ ಕೊಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಸೋತು ಸಚಿವ ಗಾದಿ ಅನುಭವಿಸುತ್ತಿರುವರಿಗೆ ಟಾಂಗ್ ನೀಡಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ಕೊಡದೆ ಇರುವದಕ್ಕೆ ನನ್ನಲ್ಲಿ ಯಾವುದೇ ಅಸಮಾಧಾನವಿಲ್ಲ. 8 ಬಾರಿ ಶಾಸಕನಾಗಿದ್ದೇನೆ ಮುಂದೆ ಮಂತ್ರಿ ಕೊಟ್ಟರೆ ನಿಭಾಯಿಸುತ್ತೇನೆ ಎಂದರು.
ಮಂತ್ರಿ ಆಗಬೇಕಿತ್ತು ಆದರೆ ಆಗಿಲ್ಲ ಅದು ನನ್ನ ನಸೀಬಿನಲ್ಲಿಲ್ಲ. ಮೂರು ವರ್ಷ ಅವಧಿಯಿದೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮಂತ್ರಿ ಆಗುತ್ತೇನೆ ಎನ್ನುವ ಆಸೆಯಿದೆ. 8 ಬಾರಿ ಶಾಸಕನಾಗಿದ್ದೇನೆ ಮುಖ್ಯಮಂತ್ರಿ ಆಗುವ ದಿನಗಳು ದೂರಿಲ್ಲ. ಇನ್ನೂ ನನಗೆ ವಯಸ್ಸಿದೆ 10 ವರ್ಷ ರಾಜಕಾರಣ ಮಾಡುತ್ತೇನೆ. ಅಧಿಕಾರ ಇರಲಿ ಬಿಡಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಶಾಸಕನಾಗಿ ಈಗ ಸದ್ಯ ಕೆಲಸ ಮಾಡುತ್ತೇನೆ ಎಂದ ಅವರು ಈ ದಿನಮಾನಗಳಲ್ಲಿ ಯಾರ ಮೇಲೆ ಕೋಪ ಮಾಡಿಕೊಂಡರು ಏನು ಆಗುವದಿಲ್ಲ. ಹೀಗಾಗಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹೈ ಕಮಾಂಡ್ ಮೇಲೆ ನನ್ನ ಕೋಪವಿಲ್ಲ ಎಂದು ತಿಳಿಸಿದರು.
ಅಥಣಿ ಕ್ಷೇತ್ರದಿಂದ ಗೆದ್ದ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯ ಸ್ಥಾನ ಸಿಗುತ್ತದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಯಡಿಯೂರಪ್ಪ ಒಳ್ಳೆಯ ಸರ್ಕಾರ ಕೊಡುತ್ತಿದ್ದಾರೆ. ಈಗಾಗಲೇ 13 ವರ್ಷ ಮಂತ್ರಿಯಾಗಿದ್ದೇನೆ. ಹೀಗಾಗಿ ಹೊಸಬರಿಗೆ ಸಚಿವ ಕೊಟ್ಟಿದ್ದಾರೆ ತಪ್ಪೇನಿದೆ. ಖಾತೆ ಕೊಡದೆ ಇದ್ದುದ್ದಕ್ಕೆ ಮುನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಹೆಂಡತಿ ಜೊತೆಗೆ ನಾನು ಮುನಿಸಿಕೊಳ್ಳುವುದಿಲ್ಲ. ಹೀಗಿರುವಾಗ ಯಡಿಯೂರಪ್ಪ ಜೊತೆ ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ. ನನ್ನ ಯೋಗ್ಯತೆಗೆ ಯಡಿಯೂರಪ್ಪ ಇರುವ ಸಿಎಂ ಸ್ಥಾನ ಸಿಗಲೇ ಬೇಕು. ಆ ದಿಸೆಯಲ್ಲಿ ನನ್ನ ಪ್ರಯತ್ನ ಇದೆ. ದೇವರು ಆಶೀರ್ವಾದ ಮಾಡಿದರೆ ಸಿಎಂ ಆಗುತ್ತೇನೆ ಎಂದರು. ಈ ವೇಳೆ ಸೋತ ಸವದಿ ಅವರಿಗೆ ಸಚಿವ ಸ್ಥಾನ ಕೊಟ್ಟ ವಿಚಾರದ ಬಗ್ಗೆ ಮಾತನಾಡಿ ಅವರಿಗೆ ಅನುಭವ ಹೆಚ್ಚಿದೆ. ನಮಗೆ ಕಡಿಮೆ ಇದೆ ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಪರೋಕ್ಷವಾಗಿ ಸವದಿಗೆ ಟಾಂಗ್ ನೀಡಿದರು.