ಚಿಕ್ಕಮಗಳೂರು: ನಗರದ ಬೇಲೂರು ರಸ್ತೆ ಹಾಗೂ ಕೋಟೆ ಸರ್ಕಲ್ ವ್ಯಾಪ್ತಿಯ ಅಂಗಡಿ-ಮುಂಗಟ್ಟುಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತನಿಖಾ ದಳ ವಿವಿಧ ಇಲಾಖೆಗಳ ಸಹಯೋಗದಲ್ಲಿ ದಾಳಿ ನಡೆಸಿ ದಂಡ ವಿಧಿಸಿದೆ.
ಬೇಲೂರು ರಸ್ತೆ ಮತ್ತು ಕೋಟೆ ಸರ್ಕಲ್ ವ್ಯಾಪ್ತಿಯಲ್ಲಿನ ಶಾಲಾ ಆವರಣದ ಸುತ್ತ ಮುತ್ತಲಿನ ಅಂಗಡಿ-ಮುಂಗಟ್ಟುಗಳು, ಪಾನ್ ಶಾಪ್, ಬೇಕರಿ, ಜ್ಯೂಸ್ ಸೆಂಟರ್, ಹೋಟೆಲ್, ಪ್ರಾವಿಜನ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಇತರೆ ಚಿಲ್ಲರೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ 3 ತಿಳುವಳಿಕೆ ನೋಟಿಸ್ ನೀಡಲಾಗಿತ್ತು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಬರುವುದರ ಜೊತೆ ವ್ಯಸಿನಿಗಳ ಕುಟುಂಬಕ್ಕೂ ಆರ್ಥಿಕ ಹೊರೆ ಹೆಚ್ಚುತ್ತದೆ. ಇದಕ್ಕೆ ಕಡಿವಾಣ ಹಾಕಿ ವ್ಯಸನ ಮುಕ್ತ ಸಮಾಜ ರೂಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದೆ. ಅಂಗಡಿ ಮುಂಗಟ್ಟಿನ ಮಾಲೀಕರು ಈ ಬಗ್ಗೆ ಕಡ್ಡಾಯವಾಗಿ ನಾಮಫಲಕಗಳನ್ನು ಪ್ರದರ್ಶಿಸಬೇಕು. ಶಾಲಾ-ಕಾಲೇಜುಗಳ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದೆ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿತ್ತು.
ಆದರೂ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡಿದ ಹಿನ್ನೆಲೆ 15 ಪ್ರಕರಣಗಳನ್ನು ದಾಖಲಿಸಿಕೊಂಡು ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಆರ್.ದಿನೇಶ್, ಸಾಮಾಜಿಕ ಕಾರ್ಯಕರ್ತ ಎಂ.ರಾಘವೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಎಂ.ಕೆ.ಪತ್ತಾರ್, ತಾಲೂಕು ಆರೋಗ್ಯ ಇಲಾಖೆಯ ಬಿ.ಹೆಚ್.ಇ.ಒ ಬೇಬಿ, ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕುಮಾರ್, ಸಗನಯ್ಯ ಮತ್ತು ಗೋವರ್ಧನ್ ಪಾಲ್ಗೊಂಡಿದ್ದರು.