ಚಿಕ್ಕಮಗಳೂರು: ಗೊಬ್ಬರ ತುಂಬಿದ್ದ ಲಾರಿಯೊಂದು 15 ಅಡಿಯ ಪ್ರಪಾತಕ್ಕೆ ಪಲ್ಟಿ ಹೊಡೆದು ಸಂಪೂರ್ಣ ನಜ್ಜುಗುಜ್ಜಾಗಿದ್ದರೂ ಚಾಲಕ ಪವಾಡಸದೃಶ ಪಾರಾಗಿರುವ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ಗೊಬ್ಬರ ತುಂಬಿಕೊಂಡು ತರೀಕೆರೆಯಿಂದ ಚಿಕ್ಕಮಗಳೂರಿನತ್ತ ಹೋಗುತ್ತಿದ್ದ ಲಾರಿ ಸಂತವೇರಿ ಘಾಟಿಯ ಗಡಿಕಲ್ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ. ಲಾರಿ ಬೀಳುವಾಗ ಮುಂಭಾಗ ಕೆಳಮುಖವಾಗಿ ಬಿದ್ದಿದ್ದರಿಂದ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದ ಲಾರಿಯಲ್ಲಿದ್ದ ಚಾಲಕನನ್ನು ಸ್ಥಳೀಯರು ಹೊರಗೆ ಎಳೆದು ರಕ್ಷಿಸಿದ್ದಾರೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.