ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ದತ್ತಪೀಠದಲ್ಲಿ (Dattapeeta) ಉತ್ಸವದ ಹಿನ್ನೆಲೆ ನಾಗೇನಹಳ್ಳಿಯ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ದತ್ತಪೀಠದ ದತ್ತಾತ್ರೇಯ ಸ್ವಾಮಿಯ ಉತ್ಸವ (Datta Jayanti) ಈ ಬಾರಿ ಹೊಸ ರೂಪ ಪಡೆದುಕೊಂಡಿದೆ. ವಿ.ಎಚ್.ಪಿ, ಹಾಗೂ ಬಜರಂಗದಳ ದತ್ತಪೀಠದಲ್ಲಿ ದತ್ತಜಯಂತಿ ಮಾಡುತ್ತಿದ್ದರೆ, ಶ್ರೀರಾಮಸೇನೆ (Sri Ram Sena) ದರ್ಗಾದಲ್ಲಿ ದತ್ತಜಯಂತಿಗೆ ಮುಂದಾಗಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ದರ್ಗಾ ಸುತ್ತಮುತ್ತ ನಿಷೇಧಾಜ್ಞೆ ಹೇರಿದೆ. ಪೊಲೀಸ್ ಇಲಾಖೆಯು ಪ್ರಮೋದ್ ಮುತಾಲಿಕ್ ಹಾಗೂ ಗಂಗಾಧರ್ ಕುಲಕರ್ಣಿ ಅವರಿಗೆ ಜಿಲ್ಲೆಗೆ ಬರಲು ನಿರ್ಬಂಧ ವಿಧಿಸಿದೆ. ಈ ಮಧ್ಯೆ ಸಾವಿರಾರು ಜನರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಇದನ್ನೂ ಓದಿ: ಚಾರಣಕ್ಕೆ ತೆರಳಿದ್ದ ಯುವಕ ಬೆಟ್ಟದಲ್ಲೇ ಕುಸಿದು ಬಿದ್ದು ದುರ್ಮರಣ
ದರ್ಗಾ ಇರುವ ನಾಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 57ರ 200 ಮೀಟರ್ ಸುತ್ತಮುತ್ತ 4 ದಿನಗಳ ಕಾಲ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ. ಪೊಲೀಸ್ ಇಲಾಖೆ ಪ್ರಮೋದ್ ಮುತಾಲಿಕ್ ಹಾಗೂ ಗಂಗಾಧರ್ ಕುಲಕರ್ಣಿ ಅವರಿಗೆ ಮುಂದಿನ ಜ.5ರವರೆಗೆ ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಿದೆ.
ದತ್ತಜಯಂತಿಯ ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನವಾದ ಭಾನುವಾರ ಶಾಂತಿಯುತವಾಗಿ ತೆರೆಕಂಡಿದೆ. ಉಳಿದ ಎರಡು ದಿನಗಳಲ್ಲಿ ಭಕ್ತರು ಹೆಚ್ಚಾಗಿ ಬರಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 4,000 ಪೊಲೀಸರನ್ನು ನಿಯೋಜಿಸಲಾಗಿದೆ.
ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಇಂದು (ಸೋಮವಾರ) ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. ಕಾಮಧೇನು ಗಣಪತಿ ದೇವಾಲಯದಿಂದ ಆರಂಭವಾಗುವ ಯಾತ್ರೆ ಕೆಇಬಿ ಸರ್ಕಲ್, ಬಸವನಹಳ್ಳಿ, ಹನುಮಂತಪ್ಪ ಸರ್ಕಲ್, ಎಂ.ಜಿ.ರಸ್ತೆ ಮೂಲಕ ಸಾಗಿ ಆಜಾದ್ ಪಾರ್ಕ್ವರೆಗೆ ಸುಮಾರು 4 ಕಿ.ಮೀ. ನಡೆಯಲಿದೆ.
ಇನ್ನೂ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತಂತ್ರ ಹೆಣೆಯುತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್ ಇದೇ ಮೊದಲ ಬಾರಿಗೆ ದತ್ತ ಮಾಲೆ ಧರಿಸಿ ದತ್ತಭಕ್ತರಾಗಿದ್ದಾರೆ. ಮಾಲಾಧಾರಿ ವಿಪಕ್ಷ ನಾಯಕ ಅಶೋಕ್, ದತ್ತಪೀಠ ಅತಿಕ್ರಮಣವಾಗಿದೆ. ದತ್ತಪೀಠ ದತ್ತಪೀಠವಾಗಿಯೇ ಉಳಿಯಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಶಾಸಕ ಸಿ.ಟಿ.ರವಿ ದತ್ತಪೀಠ ಹಿಂದೂಗಳ ಪೀಠ, ಹಿಂದೂಗಳಿಗೆ ಸೇರಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಿಮಿಕ್ರಿ ಮಾಡೋದು ಕಲೆ ಆಗಿದ್ದು, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ: ಟಿಎಂಸಿ ಸಂಸದ