ಚಿಕ್ಕಮಗಳೂರು: ಹಾವು ಕಪ್ಪೆಗಳನ್ನ ತಿಂದು ಬದುಕುದು ಸಾಮಾನ್ಯ. ಆದರೆ ಕಪ್ಪೆಯನ್ನು ಕಚ್ಚಿಕೊಂಡು ಮರ ಹತ್ತುವ ದೃಶ್ಯ ನೋಡಲು ಸಿಗುವುದು ಪ್ರಕೃತಿಯಲ್ಲಿ ತುಂಬಾ ವಿರಳ. ಅಂತಹ ಅಪರೂಪದ ಘಟನೆಗೆ ಕಾಫಿನಾಡು ಸಾಕ್ಷಿಯಾಗಿದೆ.
ಶೃಂಗೇರಿ ತಾಲೂಕಿನ ಸಸಿಮನೆ ಗ್ರಾಮದ ಶಿವಶಂಕರ್ ಎಂಬವರು ಅಂತಹ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಹಳ್ಳೀಲಿ ಮನೆ ಅಕ್ಕ-ಪಕ್ಕ, ಹಿಂದೆ-ಮುಂದೆ ಹಾವುಗಳು ಬರುವುದು ಮಾಮೂಲಿ. ಹಳ್ಳಿಗರು ಅವುಗಳನ್ನು ಏನೂ ಮಾಡುವುದಿಲ್ಲ. ಬರುತ್ತವೆ, ಹೋಗುತ್ತವೆ ಎಂದು ಸುಮ್ಮನಾಗುತ್ತಾರೆ. ಮನೆಯೊಳಗೆ ಬಂದರೆ ಅಷ್ಟೇ ಹಿಡಿದು ಬೇರೆ ಕಡೆಗೆ ಬಿಡುತ್ತಾರೆ.
ಶಿವಶಂಕರ್ ಅವರ ಮನೆ ಸಮೀಪದ ತೋಟದಲ್ಲಿ ಈ ಹಿಂದೆ ಕೆರೆಹಾವು ಕಾಣಸಿಕೊಂಡಿತ್ತು. ಅದು ಯಾರಿಗೂ ಏನನ್ನೂ ಮಾಡಲ್ಲ, ತನ್ನ ಪಾಡಿ ಹೋಗುತ್ತೆ ಎಂದು ಸುಮ್ಮನಾಗಿದ್ದರು. ಆದರೆ ಬಹಳ ಹೊತ್ತು ಅಲ್ಲಿಯೇ ಕುಳಿತ್ತಿದ್ದ ಹಾವು ಕಪ್ಪೆಯನ್ನು ಕಚ್ಚಿದೆ. ಬಳಿಕ ಪಕ್ಕದಲ್ಲಿದ್ದ ಮರವನ್ನು ಹತ್ತಲು ಯತ್ನಿಸಿದೆ. ಇದೇ ವೇಳೆ, ಮನೆಯ ಹಿಂದೆ ಬಂದ ಮಕ್ಕಳು ಇದನ್ನು ನೋಡಿ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಹಾವಿಗಿಂತ ಕಪ್ಪೆಯೇ ದೊಡ್ಡದಾಗಿದ್ದು, ಹಾವು ಅದನ್ನು ನುಂಗಲೂ ಆಗದೇ ಸ್ವಲ್ಪ ಹೊತ್ತು ಪರದಾಡಿತು. ಕಪ್ಪೆಯೂ ತಪ್ಪಿಸಿಕೊಳ್ಳಲು ಎಲ್ಲಾ ವಿಫಲ ಪ್ರಯತ್ನ ನಡೆಸಿ ಕೊನೆಗೆ ಹಾವಿಗೆ ಶರಣಾಗಿದೆ. ಆದರೆ ಹಾವು ಕಪ್ಪೆಯನ್ನು ಕಚ್ಚಿಕೊಂಡು ಮರ ಹತ್ತಲು ಯತ್ನಿಸುತ್ತಿರುವ ದೃಶ್ಯ ಮಾತ್ರ ವೀಕ್ಷಕರಲ್ಲಿ ಆಶ್ಚರ್ಯ ಮೂಡಿಸುತ್ತಿದೆ.