ಚಿಕ್ಕಮಗಳೂರು: ನಾಲ್ಕು ಕುರಿಗಳ ರಕ್ತ ಕುಡಿದ ಚಿರತೆ ಒಂದು ಕುರಿಯನ್ನು ಹೊತ್ತೊಯ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿಯ ಶಂಕರದೇವರ ಮಠದ ಬಳಿ ನಡೆದಿದೆ.
ಭಾನುವಾರ ರಾತ್ರಿ ಸುಮಾರು 12.30ಕ್ಕೆ ಕುರಿ ಮಂದೆ ಮೇಲೆ ದಾಳಿ ಮಾಡಿದ ಚಿರತೆ, ನೂರಾರು ಕುರಿಗಳ ಪೈಕಿ ನಾಲ್ಕು ಕುರಿಗಳ ರಕ್ತವನ್ನ ಕುಡಿದು, ಒಂದನ್ನ ಎಳೆದೊಯ್ದಿದೆ. ಇದನ್ನು ಕಣ್ಣಾರೆ ಕಂಡ ಕುರಿಗಾಯಿಯವರು ಜೀವ ಭಯದಿಂದ ಓಡಿದ್ದಾರೆ. ಓಡುವಾಗ ಅವರು ಬಿದ್ದು ಮೈ-ಕೈಗೆ ಗಾಯ ಮಾಡಿಕೊಂಡಿದ್ದಾರೆ.
ಈ ಗ್ರಾಮದ ಸುತ್ತಲು ಕಾಡಿದ್ದು ಚಿರತೆ ಹಾಗೂ ಕರಡಿಯನ್ನು ಕಂಡ ಸ್ಥಳೀಯರು ಹಿಂದೆಯೇ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ಕುರಿಗಳು ಸುಮಾರು 70 ಸಾವಿರ ಬೆಲೆ ಬಾಳುತ್ತಿದ್ದು, ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.