ಚಿಕ್ಕಮಗಳೂರು: ಕಳೆದ 30 ವರ್ಷದಿಂದ ಸೇವೆ ಸಲ್ಲಿಸಿ, ಆರ್ಥಿಕ ಸಂಕಷ್ಟಕ್ಕೀಡಾಗಿ ಎಂಟು ದಿನಗಳಿಂದ ಬೀಗ ಹಾಕಿದ್ದ ಏಷ್ಯಾದ ಮೊದಲ ಸಹಕಾರಿ ಸಂಸ್ಥೆ ಹಾಗೂ ದೇಶದ ಹೆಮ್ಮೆಯಾಗಿದ್ದ ಜಿಲ್ಲೆಯ ಕೊಪ್ಪ ತಾಲೂಕಿನ ಸಹಕಾರ ಸಾರಿಗೆ ಸಂಸ್ಥೆ ಬಸ್ಗಳು ಮತ್ತೆ ಓಡುವ ಸೂಚನೆ ಸಿಕ್ಕಿದ್ದು, ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಮುಷ್ಕರವನ್ನ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.
ಕಾರ್ಮಿಕರೇ ಮಾಲೀಕರಾಗಿ 30 ವರ್ಷಗಳಿಂದ ಹಳ್ಳಿಗರಿಗೆ ಸೇವೆ ಸಲ್ಲಿಸುತ್ತಿದ್ದ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಸಂಸ್ಥೆಗೆ ಬೀಗ ಹಾಕಿ, 75 ಬಸ್ಗಳನ್ನು ಶೆಡ್ನಲ್ಲಿ ನಿಲ್ಲಿಸಿ, ಸರ್ಕಾರದ ನೆರವಿಗಾಗಿ ಪ್ರತಿಭಟನೆಗೆ ಮುಂದಾಗಿದ್ದರು. ಕಳೆದ ಎಂಟು ದಿನಗಳಿಂದ ಕೊಪ್ಪ ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಡಿ.ಎನ್.ಜೀವರಾಜ್ ಸ್ಥಳದಲ್ಲೇ ಸಹಕಾರ ಸಚಿವರ ಜೊತೆ ಮಾತುಕತೆ ನಡೆಸಿದರು. ಜೀವರಾಜ್ ಸರ್ಕಾರದಿಂದ ಸಹಕಾರ ಕೊಡಿಸುವ ಭರವಸೆ ನೀಡಿದ ಮೇಲೆ ಕಾರ್ಮಿಕರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಆದರೆ, ಬಸ್ಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಿದ್ದು, ಸರ್ಕಾರದಿಂದ ಸಹಕಾರ ದೊರೆತ ಮೇಲೆ ಬಸ್ಗಳನ್ನ ರಸ್ತೆಗಿಳಿಸಲು ತೀರ್ಮಾನಿಸಿದ್ದಾರೆ.
ಕಳೆದೊಂದು ವಾರದಿಂದ ಬಸ್ಗಿಳಿಲ್ಲದೆ ಜನ ಹೈರಾಣಾಗಿದ್ದು, ಜೀವರಾಜ್ ಅವರ ಭರವಸೆಯ ಮಾತುಗಳಿಂದ ಮಲೆನಾಡಿಗರು ನಿಟ್ಟುಸಿರು ಬಿಟ್ಟಿದ್ದು, ಕೂಡಲೇ ಸರ್ಕಾರದ ನೆರವು ನೀಡಿಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಮಸ್ಯೆ ಬಗೆಹರಿಯುತ್ತೆ ಎಂದಿದ್ದ ವಿನಯ್ ಗುರೂಜಿ: ಕಾರ್ಮಿಕರ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದ್ದ ಅವಧೂತ ವಿನಯ್ ಗುರೂಜಿ ಅವರು ಕಾರ್ಮಿಕರ ಸಮಸ್ಯೆ ಬಗೆಹರಿಯುತ್ತೆ ಎಂದಿದ್ದರು. ನಿಮ್ಮೆಲ್ಲರ ಧ್ವನಿಯಾಗಿ ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಕಾರ್ಮಿಕರಿಗೆ ಭರವಸೆ ನೀಡಿದ್ದರು. ಒಂದು ವೇಳೆ, ಸಮಸ್ಯೆ ಬಗೆಹರಿಯದಿದ್ದರೆ ನಿಮ್ಮ ಜೊತೆ ನಾನು ಹಾಗೂ ಆಶ್ರಮದ ಎಲ್ಲರೂ ಉಪವಾಸ ಕುಳಿತುಕೊಳ್ಳುತ್ತೇವೆ ಎಂದಿದ್ದರು. ಇಂದು ಜೀವರಾಜ್ ಅವರು ಸರ್ಕಾರದಿಂದ ಸಹಕಾರ ಕೊಡಿಸುವ ಭರವಸೆ ನೀಡಿದ್ದು, ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ.