ಚಿಕ್ಕಮಗಳೂರು: ಮುಸ್ಲಿಮರ ಕೈ-ಬಾಯಿಂದ ಮತ್ತೊಬ್ಬರಿಗೆ ತೊಂದರೆ ಆಗಬಾರದು, ಪರೀಕ್ಷಿಸಿಕೊಳ್ಳಿ ಎಂದು ನಗರದ ಅಲ್ ಹುದಾ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ನ ಚೇರ್ಮನ್ ಮೊಹಮ್ಮದ್ ಅಹ್ಮದ್ ಮನವಿ ಮಾಡಿಕೊಂಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪ್ರವಾದಿಯವರ ವಚನವೇ ಇದೆ, ಮುಸ್ಲಿಂ ಅಂದರೆ ಅವನ ಕೈ ಹಾಗೂ ಬಾಯಿಂದ ಬೇರೆಯವರಿಗೆ ತೊಂದರೆಯಾಗಬಾರದು. ಹಾಗಾಗಿ ಯಾರದಾದರು ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದರೆ ನಿಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ ದಯವಿಟ್ಟು ಪರೀಕ್ಷೆಗೆ ಒಳಪಡಿಸಿಕೊಳ್ಳಿ. ಇದರಿಂದ ನಿಮಗೂ, ನಿಮ್ಮ ಕುಟುಂಬಕ್ಕೂ ಹಾಗೂ ದೇಶಕ್ಕೂ ಒಳ್ಳೆದಾಗುತ್ತೆ ಎಂದು ಕೇಳಿಕೊಂಡರು.
ನಮ್ಮಿಂದ ಸಮಾಜಕ್ಕೆ ಒಳ್ಳೆಯದ್ದಾಗಬೇಕೆ ವಿನಃ ಹಾನಿಯಾಗಬಾರದು. ಕೊರೊನಾ ವೈರಸ್ ಹರಡುವುದಕ್ಕೆ ನಾವು ಕಾರಣವಾಗಬಾರದು. ನಮ್ಮಿಂದ ಕೊರೊನಾ ಹರಡಿ ಬೇರೆಯವಿಗೆ ತೊಂದರೆಯಾಗಬಾರದು ಎಂದು ತಿಳಿಸಿದರು.
ನನ್ನ ಗಮನಕ್ಕೆ ಬಂದಂತೆ ನಮ್ಮ ಜಿಲ್ಲೆಯಿಂದ ಯಾರೂ ತಬ್ಲಿಘಿ ಜಮಾತ್ ಸಭೆಗೆ ಹೋಗಿಲ್ಲ. ಒಂದು ವೇಳೆ ನನ್ನ ಗಮನಕ್ಕೆ ಬಾರದೆ ಯಾರಾದರೂ ಹೋಗಿದ್ದರೆ ಅಥವಾ ಬೇರೆಯವರು ಹೋದವರು ಇದ್ದರೆ ದಯವಿಟ್ಟು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ. ನಿಮ್ಮನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿಕೊಳ್ಳಿ ಎಂದು ಮುಸ್ಲಿಂ ಸಮುದಾಯದವರಿಗೆ ಮನವಿ ಮಾಡಿಕೊಂಡರು.