ಚಿಕ್ಕಮಗಳೂರು: ಆಹಾರ ಅರಸಿ ಬಂದ 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯೊಳಗೆ ಬಂದು ಮಂಚದ ಕೆಳಗೆ ಆಶ್ರಯ ಪಡೆದುಕೊಂಡಿದ್ದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಸತ್ತಿಗನಹಳ್ಳಿಯ ಲಕ್ಷ್ಮಣ ಗೌಡ ಎಂಬವರ ಮನೆಯಲ್ಲಿ ಮಂಚದ ಅಡಿ ಕಾಳಿಂಗ ಸರ್ಪ ಅವಿತು ಕುಳಿತಿತ್ತು. ಕುಟುಂಬಸ್ಥರು ಮನೆಯ ಕಸ ಗುಡಿಸಲು ಮುಂದಾದಾಗ ಮಂಚದ ಕೆಳಗಿದ್ದ ಕಾಳಿಂಗನನ್ನ ಕಂಡು ಗಾಬರಿಗೊಂಡು, ಎಲ್ಲರೂ ಓಡಿ ಮನೆಯಿಂದ ಹೊರ ಬಂದಿದ್ದರು. ಮನೆ ಮಾಲೀಕ ಲಕ್ಷ್ಮಣ ಗೌಡ ಅವರು ಕಾಳಿಂಗ ಸರ್ಪವನ್ನು ಕಂಡು ಉರಜ ತಜ್ಞ ಮಹ್ಮದ್ ಅವರಿಗೆ ಕರೆ ಮಾಡಿದರು. ಇದನ್ನೂ ಓದಿ: ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು
ತಕ್ಷಣವೇ ಸ್ಥಳಕ್ಕೆ ಬಂದ ಮಹ್ಮದ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾರ್ಯಚರಣೆ ನಡೆಸಿ ಹಾವನ್ನು ಸೆರೆ ಹಿಡಿದಿದ್ದಾರೆ. ಮಂಚದ ಕೆಳಗಿದ್ದ ಸರ್ಪವನ್ನು ಬೆದರಿಸಿದಾಗ ಅದು ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುತ್ತಾ ಸುಮಾರು ಒಂದು ಗಂಟೆಗಳ ಕಾಲ ಆಟವಾಡಿಸಿದೆ. ಬಳಿಕ ಮಹ್ಮದ್ ವರು ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಕಾಳಿಂಗ ಸರ್ಪನನ್ನು ಸೆರೆ ಹಿಡಿದು ಅಧಿಕಾರಿಗಳೊಂದಿಗೆ ಹೋಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದು ಹೊರತಂದಾಗ ಮನೆಯವರು ಸರ್ಪವನ್ನ ನೋಡಿ ಲಕ್ಷ್ಮಣ ಗೌಡ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರು.