– ದುರ್ಬಲ ವ್ಯಕ್ತಿಗೆ ಎಲ್ಲಾ ಖಾತೆಗಳು ದುರ್ಬಲವೇ
ಚಿಕ್ಕಮಗಳೂರು: ನಾನು ಪೋಸ್ಟರ್-ಫ್ಲ್ಯಾಗ್ ಕಟ್ಟಿ, ಆಟೋದಲ್ಲಿ ಅನೌನ್ಸ್ ಮಾಡಿ ಬೆಳೆದವನು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.
ವಿವೇಕಾನಂದ ಜಯಂತಿ ಬಳಿಕ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಯಾವಾಗ, ಯಾರಿಗೆ ಬೇಕಾದರೂ ಆಗಬಹದು. ಅದು ಸಿಎಂ ವಿವೇಚನೆಗೆ ಬಿಟ್ಟಿದ್ದಾಗಿದೆ. ವರಿಷ್ಠರು ಸಲಹೆ ಕೊಡುತ್ತಾರೆ, ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಕೆಲ ಸಚಿವರಿಗೆ ಕೋಕ್ ಕೊಡ್ತಾರೆ. ಅದರಲ್ಲಿ ನಿಮ್ಮ ಹೆಸರು ಇದೆಯಂತೆ ಎಂಬ ಪ್ರಶ್ನೆಗೆ ಸಚಿವರು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ನಾನು ಪೋಸ್ಟರ್-ಫ್ಲ್ಯಾಗ್ ಕಟ್ಟಿ, ಆಟೋದಲ್ಲಿ ಅನೌನ್ಸ್ ಮಾಡಿ ಬೆಳೆದವನು. ನಾನು ಬದುಕಿರುವವರೆಗೂ ನನ್ನ ಕಾರ್ಯಕರ್ತ ಸ್ಥಾನವನ್ನ ಯಾರೂ ಕಿತ್ತುಕೊಳ್ಳಲ್ಲ ಸಾಧ್ಯವಿಲ್ಲ ಎಂದು ಸಚಿವ ಸ್ಥಾನ ಹೋದರೆ ಕಾರ್ಯಕರ್ತನಾಗಿ ಇರುತ್ತೇನೆಂದು ತಿಳಿಸಿದ್ದಾರೆ.
ಕೆಲಸ ಮಾಡೋದಕ್ಕೆ ಯಾವ ಪೋಸ್ಟ್ ಆದರೇನು? ಮಂತ್ರಿಯ ವ್ಯಾಪ್ತಿ ಹಾಗೂ ಸಾಮಥ್ರ್ಯ ನನಗೆ ಗೊತ್ತು. ಎಂ.ಪಿ. ಪ್ರಕಾಶ್ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಬಹುದು, ಪ್ರವಾಸೋದ್ಯಮ ಇಲಾಖೆಯಾಗಬಹುದು ಎಷ್ಟು ಕೆಲಸವಾಗಿದೆ ಎಂದು ಮೌಲ್ಯಮಾಪನ ಮಾಡಿ ನೀವೇ ಜಡ್ಜ್ ಮಾಡಿ ಎಂದು ಹೇಳಿದರು.
ಪ್ರಬಲ ಖಾತೆ ಸಿಗುತ್ತಾ ಎಂಬ ಪ್ರಶ್ನೆಗೆ ವ್ಯಕ್ತಿ ದುರ್ಬಲನಾದರೆ ಎಲ್ಲಾ ಖಾತೆಯೂ ದರ್ಬಲವೇ, ವ್ಯಕ್ತಿ ಪ್ರಬಲನಾಗಿದ್ರೆ ಯಾವ ಖಾತೆಗಾದರೂ ಪ್ರಾಬಲ್ಯ ತರಬಹುದು ಎಂದು ಉತ್ತರ ನೀಡಿದರು.