ಚಿಕ್ಕಮಗಳೂರು: ದತ್ತಾತ್ರೇಯನಿಗೆ ಮಡಿ ಹಾಗೂ ಜಾತಿಭೇದ ಇಲ್ಲ. ಹೀಗಿರುವಾಗ ಅರ್ಚಕರಲ್ಲಿ ಮಡಿ ಹಾಗೂ ಜಾತಿ ಹುಡುಕುವ ಪ್ರಶ್ನೆಯೇ ಇಲ್ಲ. ದತ್ತಾತ್ರೇಯನಿಗೆ ಯಾರೇ ಅರ್ಚಕರಾದರೂ ಸರಿ. ಆದರೆ, ಹಿಂದೂ ಅರ್ಚಕರು ನೇಮಕವಾಗಿ ದತ್ತಪೀಠದಲ್ಲಿ ಹಿಂದೂ ಪದ್ಧತಿ ಪ್ರಕಾರ ಪೂಜೆಯಾಗಬೇಕು ಅನ್ನೋದಷ್ಟೆ ನಮ್ಮ ಬೇಡಿಕೆ ಎಂದು ಮಾಲಾಧಾರಿ, ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಮಾಲಾಧಾರಿಯಾಗಿ ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ (ಪಡಿ ಸಂಗ್ರಹ) ನಡೆಸಿ ಮಾತನಾಡಿದ ಅವರು, ಭಕ್ತಿ-ಭಾವದ ಸಮ್ಮಿಲನದೊಂದಿಗೆ ದತ್ತಪೀಠಕ್ಕೆ ಹೋಗುತ್ತಿದ್ದೇವೆ. 43 ವರ್ಷದ ಪರಿಶ್ರಮ-ಸಂಕಲ್ಪ, ಭಕ್ತಿ-ಶಕ್ತಿಯ ಆಂದೋಲನ ಅಯೋಧ್ಯೆ ಮಾದರಿಯಲ್ಲಿ ಗುರಿ ಮುಟ್ಟುವ ವಿಶ್ವಾಸ ನನಗಿದೆ. ಇದೊಂದು ನ್ಯಾಯ ಹಾಗೂ ತತ್ವಬದ್ಧವಾದ ಹೋರಾಟವಾಗಿದ್ದು, ದತ್ತಪೀಠದ ತೀರ್ಪು ನಮ್ಮಂತೆಯೇ ಬರುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ಗೆ ನಿಲುವಿಗೆ ಸ್ವಾಗತ:
ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಜೆಡಿಎಸ್ ದಲಿತ ಅರ್ಚಕರನ್ನ ನೇಮಕ ಮಾಡಲಿ ಎಂದು ಆಗ್ರಹಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದಲಿತ ಅಥವಾ ವೇದ-ಆಗಮನ ಕಲಿತ ಯಾರೇ ಅರ್ಚಕರಾದರೂ ಅದನ್ನ ಸ್ವಾಗತಿಸುತ್ತೇವೆ. ಆದರೆ ಹಿಂದೂ ಅರ್ಚಕರು ನೇಮಕವಾಗಬೇಕು ಎಂದು ಜೆಡಿಎಸ್ಗೆ ಟಾಂಗ್ ಕೊಟ್ಟಿದ್ದಾರೆ. ಕಡೆಗೂ ಜೆಡಿಎಸ್ ತನ್ನ ನಿಲುವು ಬದಲಿಸಿಕೊಂಡು ಅರ್ಚಕರ ನೇಮಕಕ್ಕೆ ಒತ್ತಾಸೆಯಾಗಿ ನಿಂತು, ಬಹುಕಾಲದ ದತ್ತಪೀಠ ಮುಕ್ತಿಯ ಹೋರಾಟಕ್ಕೆ ತಾವು ಬೆಂಬಲಿಸುವಂತೆ ಸಹಕರಿಸಿರೋದನ್ನ ನಾನೂ ಬೆಂಬಲಿಸ್ತೇನೆ ಎಂದಿದ್ದಾರೆ.
ಸಚಿವ ಸಿ.ಟಿ.ರವಿ ದತ್ತಪೀಠದ ಹೋರಾಟವನ್ನ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೇ ನೀಡಿದ ಸಿ.ಟಿ.ರವಿ, ದತ್ತಪೀಠ ಮುಕ್ತಿಯ ಹೋರಾಟಕ್ಕೆ ತನ್ನನ್ನ ತಾನು ತೊಡಗಿಸಿಕೊಂಡಾಗ ನಾನು ಯಾವುದೇ ಪಕ್ಷದ ಸದಸ್ಯನೂ ಆಗಿರಲಿಲ್ಲ ಎಂದು ಆರೋಪಿತರಿಗೆ ತಿರುಗೇಟು ನೀಡಿದ್ದಾರೆ.