ಚಿಕ್ಕಮಗಳೂರು: ಶಾಸಕರೊಬ್ಬರು ರಾತ್ರೋರಾತ್ರಿ ಹಾಸ್ಟೆಲ್ಗೆ ತೆರಳಿ ಸಾಂಬಾರ್ ಪರೀಕ್ಷೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ರಾತ್ರೋರಾತ್ರಿ ತಾಲೂಕಿನ ಹೆಸ್ಕಲ್ ಗ್ರಾಮದಲ್ಲಿರುವ ಗಿರಿದರ್ಶಿನಿ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತೆರಳಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಪರೀಕ್ಷೆ ಮಾಡಿದ್ದಾರೆ. ಶಾಸಕರು ದಿಢೀರ್ ಭೇಟಿ ನೀಡಿ ಅಡುಗೆ ಮನೆಗೆ ಧಾವಿಸಿ ಸಾಂಬಾರ್ ಕುಡಿದು ಆಹಾರ ಪರೀಕ್ಷೆ ಮಾಡಿದಾಗ ಅಡುಗೆಯವರು ಕಕ್ಕಾಬಿಕ್ಕಿಯಾಗಿದ್ದಾರೆ.
ಆ ಬಳಿಕ ಆಹಾರ ಸಾಮಾಗ್ರಿಗಳು ಸೇರಿದಂತೆ ಊಟ ಇನ್ನಿತರ ಮೂಲಭೂತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾಹಿತಿ ಪಡೆದರು. ಈ ವೇಳೆ ಊಟ, ವಸತಿ ಮತ್ತು ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಶಾಸಕರಿಗೆ ದೂರು ನೀಡಿದರು. ಮೊನ್ನೆ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಹಾಸ್ಟೆಲ್ ಗಳ ಅವ್ಯವಸ್ಥೆ ಬಗ್ಗೆ ಚರ್ಚೆ ಆಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಪರಿಶೀಲನೆ ಮಾಡಿದ್ದಾರೆ.