ಚಿಕ್ಕಮಗಳೂರು: ಕಳೆದ ರಾತ್ರಿ ನಗರದ ಹಿರೇಮಗಳೂರು ರಸ್ತೆಯ ಪಾರ್ಕ್ ಇನ್ ಬಾರ್ ಅಂಡ್ ರೆಸ್ಟೋರೆಂಟ್ಗೆ ಕನ್ನ ಹಾಕಿರೋ ಕುಡುಕರು ಕೇವಲ ಲೋಕಲ್ ಎಣ್ಣೆಯನ್ನಷ್ಟೇ ಕದ್ದು, ಕಾಸ್ಟ್ಲಿ ಎಣ್ಣೆಯನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ನಾವು ಪುಕ್ಕಟೆ ಸಿಗುತ್ತೆಂದು ಬ್ರ್ಯಾಂಡ್ ಬದಲಿಸಲ್ಲ ಎಂಬಂತೆ ಕುಡುಕರು ಕಳ್ಳತನ ಮಾಡಿದ್ದಾರೆ.
ಪ್ರತಿ ಬಾರಿ ಸಿಎಂ ಯಡಿಯೂರಪ್ಪನವರು ಸುದ್ದಿಗೋಷ್ಠಿ ಕರೆದಾಗ ನಮಗೇನಾದರು ಗುಡ್ ನ್ಯೂಸ್ ಕೊಡ್ತಾರಾ? ಎಣ್ಣೆ ಸಿಗುತ್ತಾ ಅಂತ ಆಸೆಗಣ್ಣಿನಿಂದ ನೋಡುತ್ತಿದ್ದರು. ಆದರೆ ಕೊರೊನ ಆತಂಕದಿಂದ ಲಾಕ್ಡೌನ್ ವಿಸ್ತರಣೆ ಆದಂತೆಲ್ಲಾ ಮದ್ಯ ಮಾರಾಟ ಕೂಡ ಬಂದ್ ಆಗ್ತಾ ಹೋಗಿದೆ. 26 ದಿನಗಳಿಂದ ಎಣ್ಣೆ ಸಿಗದೇ ಕಂಗಾಲಾಗಿದ್ದ ಜನ ಇದೀಗ ಕಳ್ಳತನಕ್ಕೆ ಇಳಿದಿದ್ದಾರೆ. ರೆಸ್ಟೋರೆಂಟ್ ಕಿಟಕಿಯ ಗಾಜನ್ನ ಒಡೆದು, ಸರಳನ್ನ ಆಕ್ಸರ್ ಫ್ರೇಮ್ ಬ್ಲೇಡಿನಿಂದ ಕೊಯ್ದು ಒಳ ನುಗ್ಗಿದ್ದಾರೆ.
ಇಲ್ಲಿ ಕದ್ದಿರೋ ರೀತಿ ನೋಡಿದರೆ ಇವರು ಕಳ್ಳರಲ್ಲ. ಮದ್ಯವ್ಯಸನಿಗಳಷ್ಟೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಮದ್ಯಕ್ಕಾಗಿ ಕಳ್ಳತನ ಮಾಡಿದ್ದಾರೆ. ಅದು ಕದಿಯುವಾಗಲೂ ತಮ್ಮ ಬ್ರ್ಯಾಂಡ್ ಹಾಗೂ ಲೋಕಲ್ ಎಣ್ಣೆಯನ್ನಷ್ಟೆ ಕದ್ದಿದ್ದಾರೆ. ಜಾನಿ ವಾಕರ್ ನಂತಹ ಕಾಸ್ಟ್ಲಿ ಎಣ್ಣೆಯೂ ಇತ್ತು. ಆದರೆ ಅದ್ಯಾವುದನ್ನೂ ಮುಟ್ಟಿಲ್ಲ. ಕೇವಲ ಲೋಕಲ್ ಎಣ್ಣೆಯನ್ನಷ್ಟೆ ತೆಗೆದುಕೊಂಡು ಹೋಗಿದ್ದಾರೆ. ಸುಮಾರು ಆರೇಳು ಬಾಕ್ಸ್ ಎಣ್ಣೆಯನ್ನ ಹೊತ್ತೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.