ಚಿಕ್ಕಮಗಳೂರು: ಬಸ್ನಿಂದ (Bus) ಇಳಿಯುವಾಗ ಬಿದ್ದು ಬ್ರೈನ್ ಡೆಡ್ (Brain Dead) ಆಗಿದ್ದ ಚಿಕ್ಕಮಗಳೂರಿನ (Chikkamagaluru) ಯುವತಿ ರಕ್ಷಿತಾ (18) ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.
ರಕ್ಷಿತಾ ಅವರ ಅಂಗಾಗಳು 9 ಜನರ ಜೀವ ಉಳಿಸುತ್ತಿವೆ. ರಕ್ಷಿತಾ ಅವರ ಹೃದಯವನ್ನು ಬೆಂಗಳೂರಿಗೆ ಏರ್ಲಿಫ್ಟ್ ಮಾಡಲಾಗಿದೆ. ರಕ್ಷಿತಾ ಅವರ ಕಣ್ಣು, ಕಿಡ್ನಿಯನ್ನು ಮಂಗಳೂರಿಗೆ ಝೀರೋ ಟ್ರಾಫಿಕ್ನಲ್ಲಿ ರವಾನಿಸಲಾಗಿದೆ. ರಕ್ಷಿತಾ ಅವರ ಲಿವರ್ ಅನ್ನು ಉಡುಪಿಗೆ ಕಳಿಸಲಾಗಿದೆ. ರಕ್ಷಿತಾ ಅವರ ಹೃದಯವನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿರುವ 12 ವರ್ಷದ ಬಾಲಕಿಗೆ ಕಸಿ ಮಾಡಲಾಗಿದೆ. ಇದಾದ ಬಳಿಕ ದಾರಿಯುದ್ಧಕ್ಕೂ ಜನ ಕೂಡ ರಕ್ಷಿತಾಳ ಆತ್ಮಕ್ಕೆ ಶಾಂತಿ ಕೋರಿ ಮತ್ತೊಂದು ಜೀವ ಉಳಿಯಲು ಶುಭಹಾರೈಸಿದರು. ಅಂಗಾಂಗ ಕಸಿ ಬಳಿಕ ರಕ್ಷಿತಾ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಡೂರಿನ ಸೋಮನಹಳ್ಳಿ ತಾಂಡಾಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಯ್ತು. ಇದನ್ನೂ ಓದಿ: ಬಸ್ನಿಂದ ಬಿದ್ದು ಯುವತಿಯ ಮೆದುಳು ನಿಷ್ಕ್ರಿಯ – ಸಾವಿನಲ್ಲೂ 9 ಜನರ ಬಾಳಿಗೆ ಬೆಳಕಾದಳು
ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾಳ ಅಪ್ಪ-ಅಮ್ಮರದ್ದು ದೊಡ್ಡ ಕುಟುಂಬ. ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು ಸೇರಿದಂತೆ 14 ಜನ ಅಣ್ಣತಮ್ಮಂದಿರಿಗೆ ರಕ್ಷಿತಾ ಒಬ್ಬಳೆ ಮುದ್ದಿನ ತಂಗಿ. ಹಾಗಾಗಿ, ಆಕೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಹೆತ್ತವರು, ಸಹೋದರರೂ ಹೋರಾಡಿದ್ದರು. ಹಳ್ಳಿಯಲ್ಲಿ ನೂರಾರು ಜನ ಆಕೆಗೆ ಪ್ರಾರ್ಥಿಸಿದ್ದರು. ಕುಟುಂಬಸ್ಥರು ಮೂರ್ನಾಲ್ಕು ದಿನದಿಂದ ಊಟ-ತಿಂಡಿ-ನಿದ್ದೆ ಬಿಟ್ಟು ಹೋರಾಡಿದ್ದರು. ಆದರೆ, ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದು ವೈದ್ಯರು ಉಳಿಯಲು ಸಾಧ್ಯವೇ ಇಲ್ಲ ಎಂದಾಗ ಹೆತ್ತವರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಅದರಂತೆ 9 ಜನರಿಗೆ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ರಕ್ಷಿತಾ ಅಗಲಿಕೆಯ ನೋವಿನ ನಡುವೆಯೂ ಕುಟುಂಬಸ್ಥರು ತೆಗೆದುಕೊಂಡ ಈ ನಿರ್ಧಾರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ಹಿಜಬ್ ಅರ್ಜಿ ವಿಚಾರಣೆ ಅಂತ್ಯ – ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್