ಚಿಕ್ಕಮಗಳೂರು: ನಗರದ (Chikkamagaluru) ಕೋಟೆ ಬಡಾವಣೆಯಲ್ಲಿರುವ ದರ್ಗಾದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ ಹಾಗೂ ಖಾಲಿ ಜಾಗದಲ್ಲಿ ನೂತನ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಮಗಾರಿಯನ್ನು ತಡೆದು ನೂರಾರು ಸ್ಥಳೀಯರು ಪ್ರತಿಭಟನೆ (Protest) ನಡೆಸಿದ್ದಾರೆ.
ದರ್ಗಾಕ್ಕೆ ದಾನ ನೀಡಿರುವ ಜಾಗದಲ್ಲಿ ನೂತನ ಕಾಮಗಾರಿ ನಡೆಸಬಾರದು ಎಂದು ಸ್ಥಳೀಯರು ಹೇಳಿದ್ದರು. ಆದರೂ ನೂತನ ಕಾಮಗಾರಿ ನಡೆಸಲಾಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಸಹ ಇದೇ ರೀತಿ ಘಟನೆ ನಡೆದಿತ್ತು. ಆಗ ಕ್ರಮ ಕೈಗೊಳ್ಳುವುದಾಗಿ ಅಂದಿನ ನಗರಸಭೆ ಅಧ್ಯಕ್ಷರು ಹಾಗೂ ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಸ್ಥಳಕ್ಕೆ ಬಂದು ಮಾಹಿತಿ ಪಡೆದಿದ್ದಾರೆ. ಈ ವೇಳೆ ದರ್ಗಾಕ್ಕೆ ದಾನ ನೀಡಿರುವ ಜಾಗದಲ್ಲಿ ನೂತನವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಅಕ್ರಮವಾಗಿ ದರ್ಗಾ ಸಮೀಪದಲ್ಲಿರುವ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ. ನೂತನವಾಗಿ ನಡೆಸುತ್ತಿರುವ ಕಾಮಗಾರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಬೇಕು ಅಲ್ಲಿಯವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟುಹಿಡಿದ್ದಾರೆ.
ಪ್ರತಿಭಟನಾನಿರತರ ಮನವೊಲಿಸಲು ನಗರಸಭೆ ಅಧ್ಯಕ್ಷೆ ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳೀಯರು ತಮ್ಮ ಪಟ್ಟು ಸಡಿಲಿಸದೆ ಪ್ರತಿಭಟನೆ ಮುಂದುವರೆಸಿದರು.
ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಸ್ಥಳಕ್ಕೆ ಆಗಮಿಸಿ, ಅಲ್ಲಿಂದ ಹಿಂತಿರುಗಲು ಯತ್ನಿಸುತ್ತಿದ್ದಾಗ ಪ್ರತಿಭಟನಾನಿರತರು ಅವರ ಕಾರನ್ನು ಹಿಂಬಾಲಿಸಿ ಕಾರಿನಿಂದ ಕೆಳಗಿಳಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಪಟ್ಟು ಹಿಡಿದರು. ಸಮಸ್ಯೆಯನ್ನು ಪರಿಹರಿಸದಿದ್ದರೇ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಈ ವೇಳೆ ನಗರಸಭೆ ಆಯುಕ್ತರು ಪ್ರತಿಭಟನಕಾರರ ಮನವೊಲಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಸ್ಥಳದಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿರುವ ಪೊಲೀಸ್ ಇಲಾಖೆ ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಿ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.