ಚಿಕ್ಕಮಗಳೂರು: ಮಿಣಿ-ಮಿಣಿ ಪೌಡರ್ ಎಂದದ್ದು ಅವರೇ, ಅವರ ಬಾಯಿಂದ ಬರದಿದ್ದರೆ ವೈರಲ್ ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಟಾಂಗ್ ನೀಡಿದ್ದಾರೆ.
ಇಂದು ಜಿಲ್ಲೆಯ ಕಡೂರಿನ ಚೌಳಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅದನ್ನು ಡಿಮೋಕ್ರೇಟಿಕ್ ವೇನಲ್ಲಿ ಸ್ವೀಕರಿಸಬೇಕು. ಗಾಂಧೀಜಿ ತಮ್ಮನ್ನ ತಾವು ಅಪಹಾಸ್ಯಕ್ಕೆ ಒಳಪಡೋದನ್ನು ಇಷ್ಟ ಪಡುತ್ತಿದ್ದರು ಎಂದು ಸಲಹೆ ನೀಡಿದ್ದಾರೆ.
ನನ್ನನ್ನ ಅಪಹಾಸ್ಯಕ್ಕೆ ಒಳಪಡಿಸಿದ್ರೆ ಸಂತೋಷದಿಂದ ಸ್ವೀಕರಿಸುತ್ತೇನೆ. ಹಾಸ್ಯವೂ ಕೂಡ ಡೆಮಾಕ್ರಸಿಯ ಬ್ಯೂಟಿ, ಅದನ್ನು ಹಾಗೇ ತಿಳಿದುಕೊಳ್ಳಬೇಕು. ಅವರು ಇದಕ್ಕೆ ಅಷ್ಟು ವ್ಯಂಗ್ಯ ಹಾಗೂ ವ್ಯಾಘ್ರರಾದರೆ ಹೇಗೆ? ದೇಶ-ಜಗ ಮೆಚ್ಚಿರೋ ಮೋದಿ ಬಗ್ಗೆ ಏನೆಲ್ಲಾ ಪದ ಬಳಕೆ ಮಾಡಿಲ್ಲ. ಅವರು ಇದನ್ನು ಹರ್ಷದಿಂದ ಸ್ವೀಕರಿಸಬೇಕು ಎಂದು ಕುಮಾರಸ್ವಾಮಿ ಅವರಿಗೆ ಸಿಟಿ ರವಿ ಅವರು ಸಲಹೆ ನೀಡಿದ್ದಾರೆ.
ಇಂದು ಇದೇ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ನನ್ನ ಹೇಳಿಕೆಯನ್ನು ಈ ರೀತಿಯಲ್ಲಿ ವೈರಲ್ ಮಾಡುತ್ತಿರುವುದು, ಬಿಜೆಪಿಯವರ ವಿಕೃತ ಮನೋಭಾವನೆ ಮತ್ತು ಅವರಲ್ಲಿನ ಅಸಹ್ಯಕರವಾದ ಆಲೋಚನೆಗಳನ್ನ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಪಕ್ಷದವರ ಮೇಲೆ ವಾಗ್ದಾಳಿ ನಡೆಸಿದ್ದರು.