ಚಿಕ್ಕಮಗಳೂರು: ಜರ್ಮನ್ ದೇಶದ ವ್ಯಕ್ತಿ ಭಾರತಕ್ಕೆ ಆಗಮಿಸಿದ್ದು ಮೂರು ತಿಂಗಳುಗಳ ಕಾಲ ದೇಶದಾದ್ಯಂತ ಸಂಚಾರ ಮಾಡಲು ಮುಂದಾಗಿದ್ದಾರೆ. ಹೀಗೆ ಚಿಕ್ಕಮಗಳೂರಿಗೆ ಆಗಮಿಸಿದ ಪ್ರವಾಸಿಗ ಚಾರ್ಮಾಡಿ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಬಂದು ಸ್ನೇಹಿತನ ಬೈಕ್ನಲ್ಲಿ ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ದೇಶ ಹಾಗೂ ರಾಜ್ಯದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಭಾನುವಾರ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಆಗಮಿಸಿದ್ದರು. ಜರ್ಮನಿಯಲ್ಲಿ ಎಂಜಿನಿಯರ್ ಆಗಿರೋ ತೌಬಾ ಕೊಟ್ಟಿಗೆಹಾರದಲ್ಲಿ ಬೈಕ್ ನಿಲ್ಲಿಸಿ ಹೊಟೇಲ್ನಲ್ಲಿ ತಿಂಡಿ ಸವಿದಿದ್ದಾರೆ. ಈ ವೇಳೆ ಸ್ಥಳಿಯರೊಂದಿಗೆ ಮಾತನಾಡಿದ ಅವರು ಚಾರ್ಮಾಡಿಯ ಸೌಂದರ್ಯಕ್ಕೆ ಮನಸೋತಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಭಾರತ ಶಾಂತಿಪ್ರಿಯ ಹಾಗೂ ಆತ್ಮೀಯತೆಯ ಗುಣ ಹೊಂದಿರೋ ದೇಶ. ಹೀಗಾಗಿ ನಾನು ಪ್ರತಿ ವರ್ಷ ಭಾರತಕ್ಕೆ ಬಂದು ಬೈಕ್ನಲ್ಲಿಯೇ ದೇಶದ ಪ್ರಮುಖ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಇಲ್ಲಿನ ಸೌಂದರ್ಯವನ್ನ ಸವಿಯುತ್ತೇನೆ ಎಂದಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ಮುರುಡೇಶ್ವರ, ಕೊಲ್ಲೂರು, ಗೋಕರ್ಣ, ಶೃಂಗೇರಿ, ಧರ್ಮಸ್ಥಳ ಹಾಗೂ ಹೊರನಾಡಿಗೆ ಭೇಟಿ ನೀಡಲಿದ್ದೇನೆ. ಬಳಿಕ ಬೇಲೂರು-ಹಳೇಬೀಡನ್ನ ನೋಡಿಕೊಂಡು ಮಡಿಕೇರಿಗೆ ಹೋಗುವುದಾಗಿ ವಿದೇಶಿ ಪ್ರಜೆ ತಿಳಿಸಿದರು. ಭಾರತದ ಸಂಸ್ಕೃತಿ ಹಾಗೂ ಸಂಸ್ಕೃತಿಯುತ ಬದುಕು ನಮ್ಮನ್ನ ಆಕರ್ಷಿಸಿದೆ ಎಂದು ಈ ಪುಣ್ಯಭೂಮಿಯನ್ನ ಹಾಡಿ ಹೊಗಳಿದ್ದಾರೆ. ಸ್ಥಳಿಯರು ಕೂಡ ಜರ್ಮನ್ ಪ್ರಜೆ ಕಂಡು ಕುತೂಹಲಭರಿತರಾಗಿ ವೀಕ್ಷಿಸಿ ಮಾತನಾಡಿಸಿದ್ದಾರೆ.