ಚಿಕ್ಕಮಗಳೂರು: ಪಕ್ಷ ಸೂಚಿಸಿದ್ರೆ ಸರ್ಕಾರಿ ಕಾರನ್ನು ಇಲ್ಲೇ ಬಿಟ್ಟು ಬಸ್ಸಿನಲ್ಲಿ ವಾಪಸ್ ಹೋಗ್ತೀನಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪಕ್ಷ ಸೂಚಿಸಿದರೆ ಇಲ್ಲಿಂದಲೇ ಬಸ್ಸಿನಲ್ಲಿ ಹೋಗ್ತೀನಿ. ಜಾತಿ ಆಧಾರದ ಮೇಲೆ ಒತ್ತಡ ತರುವುದು ಸರಿಯಲ್ಲ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲಿ ಆಗಲಿದೆ ಎಂದಿದ್ದಾರೆ.
ಕೆಲ ವಿಷಯಗಳು ಪಕ್ಷದ ಆಂತರಿಕ ವಿಷಯ. ಸರ್ಕಾರ ಹಾಗೂ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಾದಂತ ವಿಷಯ. ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೇರಿ ನಿರ್ಣಯ ಮಾಡುತ್ತಾರೆ. ಪಕ್ಷದ ನಿರ್ಣಯ ಹಾಗೂ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ಇದನ್ನೂ ಓದಿ: ಸಿ.ಟಿ ರವಿ ನೋಡಿ ನನಗೆ ಹೊಟ್ಟೆ ಕಿಚ್ಚು: ಗೋವಿಂದ ಕಾರಜೋಳ
ಯಾವುದೇ ರಾಜಕಾರಣಿಗೆ ಪಕ್ಷ ಅಂದ್ರೆ ತಾಯಿ ಇದ್ದಂತೆ. ಪಕ್ಷವು ಸದೃಢವಾಗಿರಲು ನಾವು ಪಕ್ಷದ ನಿರ್ಣಯಗಳನ್ನ ಗೌರವಿಸದಿದ್ರೆ ಬೆಳೆಯಲು ಸಾಧ್ಯವಿಲ್ಲ. ನಾವು ಪಕ್ಷದ ನಿಲುವಿಗೆ ಬದ್ಧರಾಗಿರ್ತೀವಿ. ಯಾವುದೇ ವ್ಯತ್ಯಾಸ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪಕ್ಷ ಒಪ್ಪಿದರೆ ರಾಜೀನಾಮೆ ನೀಡಲು ಸಿದ್ಧ: ಡಿಸಿಎಂ ಕಾರಜೋಳ
ಕೆಲವರು ಮುಖ್ಯ ಮಂತ್ರಿಯಾಗ್ತೀನಿ ಎಂದಿದ್ದಾರೆ. ಕೆಲವರು ಆಗಬೇಕು ನನಗೆ ಕೊಡಿ ಎಂದಿದ್ದಾರೆ. ಕೆಲವರು ನನಗೆ ಸಚಿವ ಸ್ಥಾನ ಬೇಕು ಎಂದಿದ್ದಾರೆ. ಅವು ಸಾಮಾನ್ಯವಾದ ಬೇಡಿಕೆಗಳು. ಅವುಗಳನ್ನ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ ಎಂದಿದ್ದಾರೆ.