– 3 ಜಿಲ್ಲೆಯಲ್ಲಿ ಕಾಫಿ ಕೆಲಸ ರದ್ದು
ಚಿಕ್ಕಮಗಳೂರು: ಕಾಫಿ ಬ್ರಾಂಡ್ ಅಂಬಾಸಿಡರ್, ಕಾಫಿ ಸಾಮ್ರಾಟ ವಿ.ಜಿ ಸಿದ್ಧಾರ್ಥ್ ಅವರ ಮೃತದೇಹ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಇದೀಗ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿರುವ ಚೇತನಹಳ್ಳಿ ಎಸ್ಟೇಟ್ ನಲ್ಲಿ ನೀರವ ಮೌನ ಆವರಿಸಿದೆ.
ಸಿದ್ಧಾರ್ಥ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಚೇತನಹಳ್ಳಿ ಗ್ರಾಮದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ತಮ್ಮೂರ ಸಿದ್ದಾರ್ಥಣ್ಣರಿಗೆ ಸಂತಾಪ ಸೂಚಿಸಿದ್ದಾರೆ. ಸೋಮವಾರ ಕಾಣೆಯಾಗಿದ್ದ ಸಿದ್ಧಾರ್ಥ್ ಇಂದು ನೇತ್ರಾವತಿ ನದಿ ತಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಫಿ ಡೇ ನೌಕರರು ಹಾಗೂ ಸಿದ್ಧಾರ್ಥ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚೇತನಹಳ್ಳಿಯ ಸಿದ್ದಾರ್ಥ್ ಮನೆಯಲ್ಲಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮೊನ್ನೆ ರಾತ್ರಿಯಿಂದ ಸಿದ್ದಾರ್ಥ್ ಸುರಕ್ಷಿತವಾಗಿ ಬರಲಿ ಎಂದು ಕಾಯುತ್ತಿದ್ದರು. ಆದರೆ ಇದೀಗ ಅವರು ಇನ್ನಿಲ್ಲ ಎಂಬ ವಿಚಾರವನ್ನು ಕುಟುಂಬಸ್ಥರಿಗೆ ಹಾಗೂ ನೌಕರರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಸಿದ್ದಾರ್ಥ್ ತಾಯಿ ವಸಂತಿ ಹೆಗ್ಡೆ ಅವರು ಚೇತನಹಳ್ಳಿಯ ಮನೆಯಲ್ಲಿದ್ದು, ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಇತ್ತ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮೂರು ಜಿಲ್ಲೆಯ ಕಾಫಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು, ಹಾಸನ, ಮಡಿಕೇರಿ ಈ ಮೂರು ಜಿಲ್ಲೆಯಲ್ಲೂ ಕಾಫಿ ಕೆಲಸವನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಎಬಿಸಿ ಕಾಫಿ ಕ್ಯೂರಿಂಗ್ ಹಾಗೂ ಚೇತನಹಳ್ಳಿ ಎಸ್ಟೇಟ್ ಎರಡೂ ಕಡೆ ಸಿದ್ಧಾರ್ಥ್ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
https://www.youtube.com/watch?v=rlj9LGGpYN4