ಚಿಕ್ಕಬಳ್ಳಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಗ್ಗಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 50 ವರ್ಷದ ರತ್ನಮ್ಮ ಮೃತ ಮಹಿಳೆ. ಪತಿಯ ಅಕಾಲಿಕ ಮರಣದ ನಂತರ ಮಕ್ಕಳೆಲ್ಲ ತಾತನ ಮನೆ ಸೇರಿಕೊಂಡಿದ್ರೆ, ಈಕೆ ಮಾತ್ರ ಗಂಡನ ಮನೆ ಮತ್ತು ಊರು ಬಿಟ್ಟು ಬರಲ್ಲ ಎಂದು ಗಂಡನ ಹಳೆ ಮನೆಯಲ್ಲಿ ಸ್ವಾವಲಂಬಿಯಾಗಿ ಒಬ್ಬರೆ ವಾಸವಾಗಿದ್ದರು.
ಒಂಟಿಯಾಗಿದ್ದ ರತ್ನಮ್ಮ ಕಳೆದ ಎರಡು ದಿನಗಳಿಂದ ಮಕ್ಕಳ ಸಂಪರ್ಕಕ್ಕೆ ಸಿಗದೆ ಫೋನ್ ಮಾಡಿದ್ರು ರಿಸೀವ್ ಮಾಡದಿದ್ದ ಕಾರಣ ಅನುಮಾನಗೊಂಡ ಮಕ್ಕಳು ಮನೆಗೆ ಬಂದು ನೋಡಿದ್ದಾರೆ. ಈ ವೇಳೆ ಮನೆಯಲ್ಲಿ ಎರಡು ದಿನಗಳಿಂದ ರತ್ನಮ್ಮ ಬಾಯಿಗೆ ಬಟ್ಟೆ ಕಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕುಟುಂಬಸ್ಥರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
ಆಸ್ತಿಗಾಗಿ ದಾಯಾದಿಗಳಿಂದಲೇ ಕೊಲೆ?
20 ವರ್ಷಗಳಿಂದೆ ರತ್ನಮ್ಮಳ ಗಂಡನನ್ನು ಯಾರು ದುಷ್ಕರ್ಮಿಗಳು ಕೊಲೆ ಮಾಡಿದ್ದರಂತೆ. ಇದಾದ ನಂತರ ಮಕ್ಕಳು ತಾತನ ಮನೆಗೆ ಹೋಗಿ ನೆಲೆಸಿದ್ದು, ರತ್ನಮ್ಮ ಮಾತ್ರ ಒಬ್ಬರೇ ಇದ್ದರು. ಅಲ್ಲದೆ ಕೊಲೆಯಾದ ರತ್ನಮ್ಮ ಹಾಗೂ ಆಕೆಯ ಮೈದನರ ಜೊತೆ ಕಳೆದ ಹಲವು ವರ್ಷಗಳಿಂದ ಜಮೀನು ವಿಚಾರದಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಕೋರ್ಟಿನಲ್ಲಿ ಕೇಸ್ ಹಾಕಿ ಎಲ್ಲರು ಬೇರೆ ಬೇರೆಯಾಗಿದ್ದರಂತೆ. ಇದರ ಜೊತೆಗೆ ರತ್ಮಮ್ಮಳ ದೊಡ್ಡ ಮಗನ ಮದುವೆಗೆ ಒಂದು ತಿಂಗಳು ಬಾಕಿಯಿದ್ದು, ಮದುವೆ ಕೆಲಸಗಳಿಗಾಗಿ ಓಡಾಡುತ್ತಿದ್ದರು.
ಈ ನಡುವೆ ರತ್ನಮ್ಮ ಮನೆಯಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದು, ಆಸ್ತಿ ವಿಚಾರವಾಗಿಯೇ ರತ್ನಮ್ಮಳನ್ನು ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿ ಒಂಟಿ ಮಹಿಳೆಯ ಕೊಲೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ್ದು, ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.