ಚಿಕ್ಕಬಳ್ಳಾಪುರ: ಕುರಿ ತೊಳೆಯುತ್ತಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೆರೆಯಲ್ಲಿ ನಡೆದಿದೆ.
ಆಂಧ್ರ ಮೂಲದ ಶಿವಶಂಕರ್ (20) ಬಾಬು (25) ಮೃತರು. ಅಂದಹಾಗೆ ಕರ್ನಾಟಕ ಆಂಧ್ರ ಗಡಿಭಾಗದ ಕುಡುಮಲಕುಂಟೆ ಕೆರೆಗ ಕುರಿಗಳನ್ನು ತೊಳೆಯಲು ಬಂದಿದ್ದ ಈ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕುರಿ ತೊಳೆದು ದಡದ ಮೇಲೆ ಕುಳಿತ್ತಿದ್ದಾಗ ಓರ್ವ ಜಾರಿ ಕೆರೆಗೆ ಬಿದ್ದಿದ್ದು ಆತನನ್ನ ರಕ್ಷಿಸಲು ಹೋದ ಮತ್ತೋರ್ವ ಸಹ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಅದೇ ಕರೆಯಲ್ಲಿ ಕುರಿ ಮೇಯಿಸುತ್ತಿದ್ದ ಮಹಿಳೆ ಘಟನೆಯನ್ನು ಇತರರಿಗೆ ತಿಳಿಸಿದ್ದು, ಗೌರಿಬಿದನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಎರಡು ಮೃತದೇಹಗಳನ್ನ ಹೊರತೆಗೆದಿದ್ದಾರೆ. ಕೆರೆಯಲ್ಲಿನ ಕುಂಟೆ 15 ರಿಂದ 20 ಅಡಿ ಆಳವಿದ್ದು ಸಾಕಷ್ಟು ಜೇಡಿಮಣ್ಣಿನಿಂದ ಕೂಡಿದ್ದು, ಇಬ್ಬರು ಹೂಳಿನಲ್ಲಿ ಸಿಲುಕಿ ಹಾಕಿಕೊಂಡು ಮೇಲಕ್ಕೆ ಬರಲಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.