ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿರುವ ಹಿನ್ನೆಲೆ ತಾಲೂಕಿನಾದ್ಯಾಂತ ಹೈ ಅಲರ್ಟ್ ಘೋಷಿಸಲಾಗಿದೆ.
ಪ್ರಮುಖವಾಗಿ ಗೌರಿಬಿದನೂರು ನಗರದ ನಾನಾ ದಿಕ್ಕುಗಳಲ್ಲೂ ಪೊಲೀಸರು ನಾಕಾಬಂಧಿ ವಿಧಿಸಿದ್ದಾರೆ. ಗೌರಿಬಿದನೂರು ನಗರದ ಒಳಗೆ ಯಾರಿಗೂ ಪ್ರವೇಶವಿಲ್ಲ ಹಾಗೂ ನಗರದಿಂದಲೂ ಸಹ ಹೊರಗಡೆ ಯಾರೂ ಹೋಗುವಂತಿಲ್ಲ. ಹೀಗಾಗಿ ಗೌರಿಬಿದನೂರು ನಗರ ಸಂಪೂರ್ಣ ಲಾಕ್ಡೌನ್ ಆಗಿದೆ. ಆದರೆ ಇದರ ನಡುವೆಯೂ ಸಹ ಕೆಲವರು ಬೈಕ್ ಏರಿ ಬರುತ್ತಿದ್ದು, ಅಂತವರಿಗೆ ಪೊಲೀಸರು ಹಿಗ್ಗಾ ಮುಗ್ಗಾ ಲಾಠಿಯಿಂದ ಬಾರಿಸುತ್ತಿದ್ದಾರೆ.
ನಗರಸಭೆಯ ಕಮೀಷನರ್ ಸಹ ಸ್ವಚ್ಚತಾ ಕಾರ್ಯದ ನಡುವೆಯೂ ಗುಂಪುಗೂಡಿದ್ದ ಜನರನ್ನ ಲಾಠಿ ಹಿಡಿದು ಚದುರಿಸಿದ್ದಾರೆ. 4 ಮಂದಿ ಸೋಂಕಿತರ ಕುಟುಂಬಸ್ಥರಿಗೂ ಹೊಸದಾಗಿ ಸೋಂಕು ಪತ್ತಾಯಾಗಿದ್ದು, ನಗರದಲ್ಲಿ ಕಳೆದ ರಾತ್ರಿ ಸೋಂಕಿತರ ಸಂಖ್ಯೆ 9ಕ್ಕೆ ಏರಿದೆ. ಈ ಸುದ್ದಿ ತಿಳಿದು ಗೌರಿಬಿದನೂರು ನಾಗರೀಕರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಜನರೇ ಸ್ವಯಂಪ್ರೇರಿತರಾಗಿ ದಿಗ್ಬಂಧನ ಹಾಕಿಕೊಂಡಿದ್ದು, ಹೊರಬರೋಕೆ ಹೆದರುತ್ತಿದ್ದಾರೆ. ಈ ಮಧ್ಯೆ ಕೆಲವರು ಉಡಾಫೆ ತೋರುತ್ತಿರುವವರಿಗೆ ಪೊಲೀಸರು ಲಾಠಿ ಬೀಸಿ ಬುದ್ದಿ ಕಲಿಸ್ತಿದ್ದಾರೆ.