ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ತಡರಾತ್ರಿ ಬಾಲ ಬಿಚ್ಚಿರುವ ಪುಡಿ ರೌಡಿಗಳು ಸಿನಿಮೀಯ ರೀತಿಯಲ್ಲಿ ಯುವಕನ ಕೊಲೆಗೆ ಸಂಚು ರೂಪಿಸಿ ಆತನ ಮೇಲೆ ದಾಳಿ ಮಾಡಿದ್ದಾರೆ.
ಚೇತನ್ ಎಂಬಾತನ ಬೈಕ್ ಗೆ ಕಾರ್ಪೋರೇಷನ್ ಬ್ಯಾಂಕ್ ಬಳಿ ಡಿಕ್ಕಿ ಹೊಡೆದ ಕಾರ್ತಿಕ್ ಹಾಗೂ ಆತನ ಸಹಚರರು ಆತನ ಮೇಲೆ ಮಾರಕಾಸ್ತ್ರಗಳಿಂದ ಮುಗಿಬಿದ್ದು ಅಟ್ಯಾಕ್ ಮಾಡಿದ್ದಾರೆ. ದಾಳಿ ವೇಳೆ ಕೈಗೆ ಗಂಭೀರವಾದ ಗಾಯವಾದ ನಂತರ ತನ್ನ ಬೈಕ್ ಅಲ್ಲೇ ಬಿಟ್ಟು ಚೇತನ್ ತನ್ನ ಸ್ನೇಹಿತನ ಮತ್ತೊಂದು ಬೈಕ್ ನಲ್ಲಿ ಪರಾರಿಯಾಗಿ ಪ್ರಾಣ ಉಳಿಸಿಕೊಂಡಿದ್ದಾನೆ.
ಚೇತನ್ ಪರಾರಿಯಾದ ಎಂಬ ಸಿಟ್ಟಿಗೆ ಕಾರ್ತಿಕ್ ಹಾಗೂ ಆತನ ಸಹಚರರು ಚೇತನ್ ಯಮಹಾ ಎಫ್ ಝಡ್ ಬೈಕಿಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಅಂದಹಾಗೆ ಬಾಗೇಪಲ್ಲಿ ಪಟ್ಟಣದ ಕಾರ್ತಿಕ್ ಹಾಗೂ ಪ್ರಾಣಾಪಾಯದಿಂದ ಬಚಾವ್ ಆದ ಚೇತನ್ ಗ್ಯಾಂಗ್ ನಡುವೆ ಗ್ಯಾಂಗ್ ವಾರ್ ನಡೆಯುತ್ತಿತ್ತು ಎನ್ನಲಾಗಿದೆ. ಪೆಟ್ರೋಲ್ ಬಂಕ್ ಬಳಿ ಕಳೆದ ಒಂದು ತಿಂಗಳ ಹಿಂದೆ ಸಣ್ಣ ವಿಚಾರಕ್ಕೆ ಇಬ್ಬರು ನಡುವೆ ಜಗಳ ನಡೆದಿತ್ತು.
ಈ ಜಗಳಕ್ಕೆ ಸೇಡು ತೀರಿಸಿಕೊಳ್ಳಲು ಕಾರ್ತಿಕ್ ಈಗ ಅಟ್ಯಾಕ್ ಮಾಡಿರಬೇಕು ಎಂದು ಗಾಯಾಳು ಚೇತನ್ ಹೇಳಿದ್ದಾನೆ. ಆದರೆ ಇದು ಸಣ್ಣ ವಿಚಾರ ಅಲ್ಲ ಯಾವುದೋ ಹುಡುಗಿಗಾಗಿ ಈ ಗ್ಯಾಂಗ್ ವಾರ್ ನಡಿದಿದೆ ಎಂದು ಸಾರ್ವಜನಿಕನ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಕಾರ್ತಿಕ್ ಹಾಗೂ ಆತನ ಸಹಚರರು ಪರಾರಿಯಾಗಿದ್ದಾರೆ.