ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನವಜೋಡಿಯೊಂದು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದೆ. ಮಾಸ್ಕ್ ಧರಿಸಿದ ನವಜೋಡಿ ಮದುವೆಗೆ ಬಂದಿದ್ದ ಬಂಧು-ಬಳಗ ಮತ್ತು ಆಪ್ತರಿಗೂ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದೆ.
ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಯುವಕ ರಂಜಿತ್ ಹಾಗೂ ದೇವನಹಳ್ಳಿ ತಾಲೂಕಿನ ಚೀಮಾಚನಹಳ್ಳಿ ಗ್ರಾಮದ ರಂಜಿತ ವಿವಾಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ವಿಜಯಪುರದ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ನೇರವೇರಿತ್ತು.
ಈ ಮದುವೆಯಲ್ಲಿ ಧಾರೆ ವೇಳೆ ನವ ಜೋಡಿ ಮಾಸ್ಕ್ ಧರಿಸಿದ್ದಾರೆ. ಹಾಗೆಯೇ ಬಂಧು ಬಳಗ ಸ್ನೇಹಿತರು ಕೂಡ ಮುಖಕ್ಕೆ ಮಾಸ್ಕ್ ಧರಿಸಿ ಧಾರೆಯೆರೆದಿದ್ದಾರೆ. ಮದುವೆ ಮನೆಯಲ್ಲಿನ ಈ ಕೊರೊನಾ ಜಾಗೃತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.