ಚಿಕ್ಕಬಳ್ಳಾಪುರ: ಏಕಾಏಕಿ ನೂರಾರು ವರ್ಷದ ಬೃಹತ್ ಗಾತ್ರದ ಅರಳಿ ವೃಕ್ಷವೊಂದು ಧರೆಗುರುಳಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನಪೇಟೆ ಗ್ರಾಮದಲ್ಲಿ ನಡೆದಿದೆ.
ನಂದಿ ಗ್ರಾಮದಿಂದ ನಂದಿಬೆಟ್ಟದ ತಪ್ಪಲಿನ, ಕಣಿವೆ ಬಸವಣ್ಣ ದೇವಾಲಯ ಮಾರ್ಗ ಮಧ್ಯೆ ಸುಲ್ತಾನಪೇಟೆ ಗ್ರಾಮದ ಆರಂಭ ದ್ವಾರದ ಬಾಗಿಲು ಬಳಿ ರಸ್ತೆ ಬದಿಗೆ ಹೊಂದಿಕೊಂಡಂತೆ ಅಶ್ವತ್ಥಕಟ್ಟೆ ಇತ್ತು. ಇದರಲ್ಲಿ ಎರಡು ಅರಳಿ ಮರಗಳಿದ್ದವು. ಆದರೆ ಇಂದು ಸಂಜೆ ಇದ್ದಕ್ಕಿದಂತೆ ಬೃಹತ್ ಗಾತ್ರದ ಅರಳಿ ಮರದ ಒಂದು ಭಾಗ ಬುಡ ಸಮೇತ ನೆಲಕ್ಕುರುಳಿತು. ಜನ ನೋಡ ನೋಡುತ್ತಿದ್ದಂತೆ ಮತ್ತೊಂದು ಭಾಗದ ಅರಳಿಮರ ಸಹ ನೆಲಕ್ಕುರುಳಿದೆ. ಇದನ್ನೂ ಓದಿ: ಬ್ರಿಡ್ಜ್ ಕೆಳಗೆ ಸಿಲುಕಿಕೊಂಡ ವಿಮಾನದ ವೀಡಿಯೋ ವೈರಲ್
ಮರ ಉರುಳಿದ ಪರಿಣಾಮ ದ್ವಾರದ ಬಾಗಿಲಿನಲ್ಲೇ ಇರುವ ಮೇಸ್ತ್ರಿ ಗುಡಿ ಆಂಜನೇಯ ದೇಗುಲಕ್ಕೆ ಹಾನಿಯಾಗಿದೆ. ಇನ್ನೂ ರಸ್ತೆಯಲ್ಲಿ ವಾಹನಗಳ ಸಂಚಾರ ಇರುತ್ತಿತ್ತು. ಆದರೆ ಘಟನೆ ನಡೆದ ಸಂದರ್ಭದಲ್ಲಿ ಯಾವುದೇ ವಾಹನಗಳ ಒಡಾಟ ಇಲ್ಲವಾದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಘಟನೆಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಒಂದು ಹೋಳು ಸುಲ್ತಾನಪೇಟೆ ಕಡೆಗೆ ಉರುಳಿದ್ರೆ, ಮತ್ತೊಂದು ಭಾಗ ನಂದಿಗ್ರಾಮದ ಮಾರ್ಗದ ಕಡೆಗೆ ಉರುಳಿದೆ. ಸದ್ಯ ಬೆಸ್ಕಾಂ ಸಿಬ್ಬಂದಿ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಇನ್ನೂ ಅರಣ್ಯ ಇಲಾಖಾಧಿಕಾರಿಗಳು ಸ್ಥಳೀಯ ಪಂಚಾಯತಿ ಅಧಿಕಾರಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರ ತೆರವು ಕಾರ್ಯ ಮಾಡಬೇಕಿದೆ. ಇದನ್ನೂ ಓದಿ: ಜಪಾನ್ ನೂತನ ಪ್ರಧಾನಿಗೆ ಮೋದಿ ಅಭಿನಂದನೆ
ಮರ ಧರೆಗುರುಳಲು ಇದು ತುಂಬಾ ಹಳೆಯದಾಗಿದ್ದು, ಬುಡ ಹಾಗೂ ಕಾಂಡದ ಮಧ್ಯಭಾಗದಲ್ಲಿ ಬಹಳಷ್ಟು ಟೊಳ್ಳಾಗಿತ್ತು. ಹೀಗಾಗಿ ಏಕಾಏಕಿ ಧರೆಗೆ ಉರುಳಿದೆ ಎನ್ನಲಾಗಿದೆ.