– ಮೀಸೆ ಮೂಡೋ ವಯಸ್ಸಲ್ಲಿ ಗ್ಯಾಂಗ್ವಾರ್
ಚಿಕ್ಕಬಳ್ಳಾಪುರ: ಮೀಸೆ ಮೂಡೋ ವಯಸ್ಸು ಏರಿಯಾದಲ್ಲೇ ತಮ್ಮದೇ ಹವಾ ಇರಬೇಕು ಅಂತ ಯುವಕರ ಗುಂಪೊಂದು ತಡರಾತ್ರಿ ಯುವಕನ ಮೇಲೆ ಅಟ್ಯಾಕ್ ಮಾಡಿ ಚಾಕುವಿನಿಂದ ಮನಸ್ಸೋ ಇಚ್ಚೆ ಇರಿದಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಎಚ್ಎಸ್ ಗಾರ್ಡನ್ ನಲ್ಲಿ ನಡೆದಿದೆ.
ಸ್ನೇಹಿತನ ಮನೆಗೆ ತೆರಳಿ ವಾಪಸ್ಸಾಗುತ್ತಿದ್ದ ಯುವಕ ಮಧು ಎಂಬಾತನ ಮೇಲೆ ದಾಳಿ ಮಾಡಿರುವ ಗ್ಯಾಂಗ್ ಅವನನ್ನು ಎಳೆದುಕೊಂಡು ಹೋಗಿ ಹೊಟ್ಟೆ ಸೇರಿದಂತೆ ಮೂರ್ನಾಲ್ಕು ಕಡೆ ಚಾಕುವಿನಿಂದ ಇರಿದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮಧು ಸದ್ಯ ಬೆಂಗಳೂರಿನ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಾಯಾಳು ತನ್ನ ಸ್ನೇಹಿತರ ಬಳಿ, ಮತ್ತೊಂದು ಗ್ಯಾಂಗಿನ ಮಂಜುನಾಥ್, ಮುನಿರಾಜು, ಆನಂದ್, ರವಿ, ಸುಹಾಸ್ ಹಾಗೂ ಮೋಹನ್ ಎಂಬವವರು ಕೃತ್ಯ ನಡೆಸಿರುವುದಾಗಿ ತಿಳಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು, ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನೆಗೆ ಮೂರ್ನಾಲ್ಕು ತಿಂಗಳ ಹಿಂದೆ ಹಲ್ಲೆಗೊಳಾಗಾದ ಮಧು ಹಾಗೂ ಆತನ ಕಡೆಯವರ ಬೈಕ್ ಅಪಘಾತಕ್ಕೀಡಾಗಿತ್ತಂತೆ. ಈ ವಿಚಾರದಲ್ಲಿ ಮತ್ತೊಂದು ಗ್ಯಾಂಗ್ ಕಡೆಯವರು, ಮಗಾ ಅವನು ಮೊನ್ನೆನೇ ಹೊಗೆ ಹಾಕಿಸ್ಕೋಬೇಕಿತ್ತು, ಏರಿಯಾದಲ್ಲಿ ಶ್ರದ್ಧಾಂಜಲಿ ಕಟೌಟ್ ಹಾಕಬೇಕಿತ್ತು ಅಂತ ಮಾತಾಡಿದ್ದರಂತೆ. ಈ ವಿಚಾರಕ್ಕೆ ಎರಡು ಗ್ಯಾಂಗ್ ಮಧ್ಯೆ ಮಾತಿಗೆ ಮಾತು ಬೆಳೆದಿತ್ತಂತೆ. ಇದೇ ಹಳೆ ದ್ವೇಷ ಇಟ್ಟುಕೊಂಡ ಯುವಕರು ಮೀಸೆ ಮೂಡೋ ವಯಸ್ಸಲ್ಲಿ ರೌಡಿಸಂಗೆ ಇಳಿದಿದ್ದು ಈ ಕೃತ್ಯ ನಡೆಸಿದ್ದಾರೆ ಅಂತ ಮಧು ಕಡೆಯವರು ತಿಳಿಸಿದ್ದಾರೆ.