ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಗುಟ್ಟಹಳ್ಳಿ ಗ್ರಾಮದ ಶ್ರೀ ಕೊಳಾಲಮ್ಮ ದೇವಾಲಯದ ಧರ್ಮದರ್ಶಿ ಪೂಜಾರಿ ಮಂಗಳಮುಖಿ ಶ್ರೀಧರ್ ಆಲಿಯಾಸ್ ಅಮ್ಮ ಹಾಗೂ ಈಕೆಯ ಶಿಷ್ಯ ಆಪ್ತ ಸಹಾಯಕ ಪೂಜಾರಿ ಲಕ್ಷ್ಮೀಪತಿ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ನವೆಂಬರ್ 12 ರಂದು ದೇವಾಲಯದ ಕೊಠಡಿಯೊಂದರಲ್ಲಿ ಪೂಜಾರಿ ಶ್ರೀಧರ್ ಹಾಗೂ ಸಹಾಯಕ ಲಕ್ಷ್ಮೀಪತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಚಿಂತಾಮಣಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದರು. ಅನುಮಾನಸ್ಪದ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಮೊದಲಿಗೆ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಕಾಡಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಮೃತರ ಮೊಬೈಲ್ನಲ್ಲಿ ಸೆರೆಯಾಗಿದ್ದ ವಿಡಿಯೋ ಸಿಕ್ಕಿದೆ. ಇದನ್ನೂ ಓದಿ: ‘ಜೈ ಭೀಮ್’ ನಟ ಸೂರ್ಯಗೆ ಜೀವ ಬೆದರಿಕೆ- ನಟನ ಮನೆಗೆ ಪೊಲೀಸ್ ಭದ್ರತೆ
ಸಾವಿಗೂ ಮುನ್ನ ಇಬ್ಬರೂ ವಿಡಿಯೋದಲ್ಲಿ, ತಮ್ಮ ಸಾವಿಗೆ ತಾವೇ ಕಾರಣ, ಯಾರೂ ಕಾರಣರಲ್ಲ. ಜೀವನದಲ್ಲಿ ಜಿಗುಪ್ಸೆಯಾಗಿ ಸಾವನ್ನಪ್ಪುತ್ತಿದ್ದೇವೆ. ದೇವಾಲಯದ ಭಕ್ತರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಆಧರಿಸಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕನಸಿನಲ್ಲಿ ಕಾಣಿಸಿಕೊಳ್ಳುವ ದೆವ್ವಕ್ಕೆ ಹೆದರಿ ಪ್ರಾಣ ಬಿಟ್ಟ ಪೊಲೀಸ್
ಈ ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ಹೇಳಿಲ್ಲ. ವಿಡಿಯೋದಲ್ಲಿ ತಮಗೆ ಯಾಕೆ ಜಿಗುಪ್ಸೆ ಅಂತ ಹೇಳಿಕೊಂಡಿಲ್ಲ. ಪೊಲೀಸರ ತನಿಖೆ ಮುಂದುವರಿದಿದೆ.