ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಒಂದು ವಾರದ ಒಳಗಾಗಿ ಕೊರೊನಾ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಅಂದಹಾಗೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆಗೆ ಆಗಮಿಸಿದ ಸುಧಾಕರ್, ನಗರ ಹೊರವಲಯದ ಕ್ಯಾಂಪಸ್ ಬಳಿ ಪರ್ಯಾಯ ಎಪಿಎಂಸಿ ಜಾಗಕ್ಕೆ ಭೇಟಿ ನೀಡಿ, ಕೊರೊನಾ ಹರುಡುವಿಕೆಯನ್ನು ತಡೆಯುವ ಸಲುವಾಗಿ ನಿರ್ಮಾಣ ಮಾಡಲಾಗಿರುವ ಸುರಂಗ ಮಾರ್ಗಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿ, ಸರ್ಕಾರ ಪರಿಣಿತ ವೈದ್ಯರ ಟಾಸ್ಕ್ ಫೋರ್ಸ್ ಕಮಿಟಿ ರಚನೆ ಮಾಡಿದ್ದು, ತಂಡ ವರದಿ ನೀಡಿದೆ. ಆದರೆ ವರದಿಯನ್ನು ಸರ್ಕಾರ ಪಾಲನೆ ಮಾಡಬೇಕಾಗಿಲ್ಲ. ರಾಜ್ಯದ ಪ್ರಮುಖ ಸಂಘಟನೆಗಳ ಮುಖಂಡರ ಜೊತೆ ಸಾಧಕ ಬಾಧಕಗಳ ಜೊತೆ ಸಿಎಂ ಚರ್ಚೆ ಮಾಡಲಿದ್ದಾರೆ. ನಾಳೆ ಪ್ರಧಾನಮಂತ್ರಿ ಮೋದಿಯವರ ಜೊತೆ ಎಲ್ಲ ರಾಜ್ಯಗಳ ಸಿಎಂಗಳ ವಿಡಿಯೋ ಕಾನ್ಫೆರೆನ್ಸ್ ಇದ್ದು, ಏಪ್ರಿಲ್ 12ರಂದು 14ರ ನಂತರ ಏನು ಮಾಡ್ತೇವೆ ಅನ್ನೋದನ್ನು ತಿಳಿಸಲಿದ್ದೇವೆ ಎಂದರು.
ಜೊತೆಗೆ ಜಿಲ್ಲೆಯಲ್ಲಿ 12 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೂ ಮೂವರು ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 8 ಮಂದಿಯೂ ಸಹ ಶಿಘ್ರವೇ ಗುಣಮುಖರಾಗಲಿದ್ದು, ಜಿಲ್ಲೆ ಕೊರೊನಾ ಮುಕ್ತವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.