ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟಿನ ತೀರ್ಪು ಯಾರ ಪರವೂ ಇಲ್ಲ ಯಾರ ವಿರುದ್ಧವೂ ಅಲ್ಲ. ನ್ಯಾಯಾಲಯ ಸ್ಪೀಕರ್ ಅವರ ಪರಮೋಚ್ಛ ಅಧಿಕಾರವನ್ನು ಎತ್ತಿ ಹಿಡಿದಿದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿಶ್ಲೇಷಿಸಿದ್ದಾರೆ.
ದೇವನಹಳ್ಳಿ ಬಳಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಸುಪ್ರೀಂ ಕೋರ್ಟ್ ಕಾಲ ಮಿತಿಯೊಳಗೆ ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥ ಮಾಡಿ ಎಂದು ಹೇಳಿದೆ ಹೊರತು ಇಂತಿಷ್ಟೇ ದಿನದಲ್ಲಿ ಮಾಡಿ ಎಂದು ಹೇಳಿಲ್ಲ. ಇನ್ನೂ ಅತೃಪ್ತ ಶಾಸಕರ ಮೇಲೆ ಸದನಕ್ಕೆ ಹಾಜರಾಗುವಂತೆ ಒತ್ತಡ ಹೇರುವಂತಿಲ್ಲ ಎಂದು ಹೇಳಿದೆ. ಆದರೆ ವಿಪ್ ನೀಡಬಾರದು ಎಂದೂ ಎಲ್ಲೂ ಹೇಳಿಲ್ಲ ಎಂದರು.
ಸಂವಿಧಾನ ದತ್ತವಾಗಿ ಶಾಸಕರಿಗೆ ವಿಪ್ ಜಾರಿ ಮಾಡಲಾಗುವುದು. ವಿಪ್ ಜಾರಿ ಮಾಡಿದ ನಂತರ ಸದನಕ್ಕೆ ಹಾಜರಾಗದಿದ್ದರೆ ಅನರ್ಹತೆ ಪ್ರಶ್ನೆ ಎದುರಾಗುತ್ತದೆ. ಆಗ ಸಹಜವಾಗಿ ಪಕ್ಷದಿಂದ ಅನರ್ಹತೆ ಮಾಡಿ ಅಂತ ಸ್ಪೀಕರ್ ಅವರಿಗೆ ದೂರು ನೀಡುತ್ತೇವೆ. ಆಗ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಅನರ್ಹತೆಯನ್ನು ಮಾಡಲೇಬೇಕಾಗುತ್ತೆ. ಹೀಗಾಗಿ ಇದು ಅತೃಪ್ತ ಶಾಸಕರ ಪರದ ತೀರ್ಪು ಅಲ್ಲ. ನ್ಯಾಯಾಲಯ ಸ್ಪೀಕರ್ ಅವರಿಗೆ ಎಲ್ಲಾ ಅಧಿಕಾರವನ್ನು ಅವರ ವಿವೇಚನೆಗೆ ಬಿಟ್ಟಿದೆ ಎಂದು ಹೇಳಿದರು.
ಸ್ಪೀಕರ್ ಯಾವಾಗ ಬೇಕಾದರೂ ತಮ್ಮ ತೀರ್ಮಾನಗಳನ್ನು ಕೈಗೊಳ್ಳಬಹುದು. ಈ ಹಿಂದೆ ಈ ರೀತಿ ಆದಂತಹ ಹಲವು ಉದಾಹರಣೆಗಳೂ ಇವೆ. ನಾಳೆ ವಿಶ್ವಾಸ ಮತಯಾಚನೆ ಮಾಡಲಿದ್ದೇವೆ. ಅದರ ಮೇಲೆ ಚರ್ಚೆ ನಡೆಯಲಿದ್ದು ನಾಳೆ ಅಥವಾ ನಾಡಿದ್ದು ಬೇಕಾದರೂ ನಾವು ಬಹುಮತ ಸಾಬೀತುಪಡಿಸುತ್ತೇವೆ. ಸದನದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಲು ಯತ್ನಿಸಿದವರ ಎಲ್ಲಾ ಮಾಹಿತಿಗಳನ್ನು ಬಿಚ್ಚಡಲಿದ್ದೇವೆ ಎಂದು ಗರಂ ಆದರು.