ಚಿಕ್ಕಬಳ್ಳಾಪುರ: ಸಚಿವ ಶ್ರೀರಾಮುಲು ಮಗಳ ಮದುವೆ ನೋಡಿದ್ರೆ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳಬೇಕಾಗುತ್ತೆ ಅಂತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹೇಳಿದರು.
ಬಾಗೇಪಲ್ಲಿ ತಾಲೂಕಿನ ಗಡಿದಂ ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ, ಇತ್ತೀಚೆಗೆ ಮಾಧ್ಯಮಗಳ ಮೂಲಕ ಶ್ರೀರಾಮುಲು ಮಗಳ ಮದುವೆ ನೋಡಿದೆ. ಆದರೆ ಅವರ ಮದುವೆ ಮಾಡಿದ ಆಡಂಭರತನ ಅದ್ದೂರಿ ವಿಚಾಹ ನೋಡಿದರೆ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಾಯಿತು ಎಂದರು.
ದುಡ್ಡು ಇರೋವರು ಬೇಕಾದ್ರೆ ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಳ್ಳಲಿ. ಆದರೆ ಆಡಂಭರದ ಮದುವೆಗಳನ್ನ ಮಾಧ್ಯಮಗಳು ದಯ ಮಾಡಿ ತೋರಿಸಬೇಡಿ. ಅದನ್ನ ನೋಡಿದರೆ ಮನೆಯಲ್ಲಿರೋ ಹೆಣ್ಣುಮಕ್ಕಳು ತಮ್ಮ ಮಕ್ಕಳಿಗೆ ಡಾಂ ಡೂಂ ಅಂತ ಮದುವೆ ಮಾಡಬೇಕು ಅಂತ ಅಂದುಕೊಳ್ಳುತ್ತಾರೆ. ಇದಕ್ಕಾಗಿ ಸಾಲ-ಸೋಲ ಮಾಡಿ ಕಷ್ಟಕ್ಕೆ ಗುರಿಯಾಗ್ತಾರೆ ಅಂತ ಶ್ರೀರಾಮುಲು ಮಗಳ ಮದುವೆ ಬಗ್ಗೆ ಪ್ರಸ್ತಾಪಿಸಿದರು.
ಬೆಂಗಳೂರಿನ ಪ್ಯಾಲೇಸ್ನಲ್ಲಿ ಶ್ರೀರಾಮುಲು ಮಗಳು ರಕ್ಷಿತಾ ಹಾಗೂ ಸಂಜೀವ್ ರೆಡ್ಡಿ ಮದುವೆ ಅದ್ಧೂರಿಯಾಗಿ ನಡೆದಿತ್ತು. ಈ ವಿವಾಹ ಸಂಭ್ರಮಕ್ಕೆ ನಟ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ವಧು-ವರರಿಗೆ ಶುಭಕೋರಿದ್ದರು.