– ಊಟ ಮಾಡದ ಮಕ್ಕಳು ಸೇಫ್
ಚಿಕ್ಕಬಳ್ಳಾಪುರ: ಊಟದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಇಬ್ಬರು ಮಹಿಳೆಯರು, ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕಾಶಾಪುರ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕು ದೊಡ್ಡಕಿರಗಂಬಿ ಗ್ರಾಮದ ಗಂಗರಾಜು (35), ಅಂದಾರ್ಲಹಳ್ಳಿ ಗ್ರಾಮದ ಶಿವಮ್ಮ (30) ಮತ್ತು ಗುಡಿಬಂಡೆ ತಾಲೂಕು ಧೂಮಕುಂಟಹಳ್ಳಿ ಗ್ರಾಮದ ಗಾಯತ್ರಿ (30) ಮೃತರು. ಮೃತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಇಂದು ಬೆಳಗ್ಗೆ ಊಟದಲ್ಲಿ ಮೆಕ್ಕೆಜೋಳಕ್ಕೆ ಬಳಸುವ ಕ್ರಿಮಿನಾಶಕ ಔಷಧಿ ಬೆರೆಸಿಕೊಂಡು ಮೂವರು ಸೇವಿಸಿದ್ದು ಸಾವನ್ನಪ್ಪಿದ್ದಾರೆ.
ಇದೇ ಸ್ಥಳದಲ್ಲಿದ್ದ ಗಾಯತ್ರಿಯ ಇಬ್ಬರು ಮಕ್ಕಳು ಊಟ ಮಾಡದೆ ಸಾವಿನಿಂದ ಪಾರಾಗಿದ್ದಾರೆ. ಮೃತ ಮಹಿಳೆಯರು ಸಹೋದರಿಯರಾಗಿದ್ದು, ಅವಿವಾಹಿತ ಗಂಗರಾಜು ಜೊತೆ ಸಂಬಂಧ ಇಟ್ಟುಕೊಂಡಿರಬಹುದು, ಹೀಗಾಗಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.
ಬಾಗೇಪಲ್ಲಿ ಪೊಲೀಸರು ಹಾಗೂ ಪ್ರಭಾರ ಎಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯ ನಂತರ ಆಸಲಿ ಸತ್ಯ ಗೊತ್ತಾಗಬೇಕಿದೆ.