– ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಮಾಜಿ ಸಚಿವರು
ಚಿಕ್ಕಬಳ್ಳಾಪುರ: ರಾಜ್ಯಸರ್ಕಾರ ಘೋಷಣೆ ಮಾಡಿರುವ ನೂತನ ಮಂಚೇನಹಳ್ಳಿ ತಾಲೂಕಿಗೆ ಗೌರಿಬಿದನೂರಿನ ಹಳ್ಳಿಗಳನ್ನು ಸೇರಿಸಿದರೆ ಸ್ವಾತಂತ್ರ್ಯ ನಂತರ ಭಾರತ-ಪಾಕಿಸ್ತಾನ ವಿಭಜನೆ ಸಮಯದಲ್ಲಾದ ರೀತಿಯಲ್ಲೇ ರಕ್ತಕ್ರಾಂತಿ ಆಗುತ್ತದೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗೌರಿಬಿದನೂರು ತಾಲೂಕಿನ ತೊಂಡೆಬಾವಿ, ಡಿ.ಪಾಳ್ಯ, ಬಿ.ಬೊಮ್ಮಸಂದ್ರ ಹಾಗೂ ನಾಮಗೊಂಡ್ಲು ಗ್ರಾಮ ಪಂಚಾಯತ್ಗಳನ್ನ ನೂತನ ಮಂಚೇನಹಳ್ಳಿ ತಾಲೂಕಿಗೆ ಸೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ತೊಂಡೆಬಾವಿ ಗ್ರಾಮ ಬಂದ್ ಮಾಡಿ ಗೌರಿಬಿದನೂರು-ಬೆಂಗಳೂರು ಮಾರ್ಗದ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ.
- Advertisement 2
- Advertisement 3
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಎನ್.ಎಚ್.ಶಿವಶಂಕರರೆಡ್ಡಿ, ಮಂಚೇನಹಳ್ಳಿ ತಾಲೂಕು ಕೇಂದ್ರ ಮಾಡಲು ನಮ್ಮ ವಿರೋಧವಿಲ್ಲ. ಆದರೆ ಮಂಚೇನಹಳ್ಳಿಗೆ ಗೌರಿಬಿದನೂರಿನ ಹಳ್ಳಿಗಳನ್ನು ಸೇರಿಸಲು ವಿರೋಧವಿದೆ. ಈ ಬಗ್ಗೆ ಸರ್ಕಾರಕ್ಕೆ ಆಕ್ಷೇಪಣೆಯನ್ನು ಸಹ ಸಲ್ಲಿಸಿದ್ದೇನೆ. ಅನರ್ಹ ಶಾಸಕ ಸುಧಾಕರ್ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಬೇಕೆಂಬ ಅಧಿಕಾರದ ಮದದಿಂದ ಬಿಜೆಪಿ ಸರ್ಕಾರ ನೂತನ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದೆ. ಇದರಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸ್ವತಃ ಸಿಎಂ ಸಹ ಭಾಗಿಯಾಗಿದ್ದಾರೆ ಎಂದು ದೂರಿದರು.
- Advertisement 4
ಸ್ವತಃ ಮನವಿ ಪತ್ರ ಸ್ವೀಕಾರಕ್ಕೆ ಬಂದಿದ್ದ ಅಪರ ಜಿಲ್ಲಾಧಿಕಾರಿ ಆರತಿ ಅನಂದ್ ಎದುರೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಶಂಕರರೆಡ್ಡಿ, ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಎಲ್ಲಿಗೆ ಬೇಕಾದರೂ ಹೋಗುತ್ತೇವೆ. ರಾಜೀ ಪ್ರಶ್ನೆಯೇ ಇಲ್ಲ. ಸ್ವಾತಂತ್ರ್ಯ ನಂತರ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಾದ ರಕ್ತಕ್ರಾಂತಿಯೇ ಆದರೂ ಆಗುತ್ತದೆ. ಇದಕ್ಕೆಲ್ಲಾ ಸರ್ಕಾರ ಹಾಗೂ ಜಿಲ್ಲಾಡಳಿತವೇ ಹೊಣೆ ಆಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದುರು.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಾಜಿ ಸಚಿವರು, ಕಣ್ಣು ಕಿವಿ ಇಲ್ಲದ ಈ ಸರ್ಕಾರಕ್ಕೆ ಇದೇ ರೀತಿ ಎಚ್ಚರಿಕೆ ಕೊಡಬೇಕು. ನಮ್ಮ ಕೂಗು ಕೇಳದಂತೆ ನಾಟಕ ಮಾಡುತ್ತಿದ್ದಾರೆ. ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.