ಚಿಕ್ಕಬಳ್ಳಾಪುರ: ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಸರ್ಕಾರ ವಿರುದ್ಧ ಮಾಜಿ ಸಚಿವ ಎಚ್ಎಂ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕೋವಿಡ್-19 ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್ಎಂ ರೇವಣ್ಣ, ರಾಜ್ಯ ಸರ್ಕಾರದ ಕೆಲ ಸಚಿವರು ಸುಖಾಸುಮ್ಮನೆ ಬಾಯಿ ಹರಿದುಕೊಳ್ಳುತ್ತಿದ್ದಾರೆ, ಅದರಲ್ಲೂ ಶೋಭಾ ಕರಂದ್ಲಾಜೆ ಕೆಲವರನ್ನು ನೇಣು ಹಾಕಿ ಅಂತಿದ್ದಾರೆ. ಒಬ್ಬ ಜನಪ್ರತಿನಿಧಿಯಾದವರು ಈ ರೀತಿ ಮಾತನಾಡುವುದು ಸರಿಯಾ ಎಂದು ಪ್ರಶ್ನೆ ಮಾಡಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಎಚ್ಎಂ ರೇವಣ್ಣ, ರಾಜ್ಯ ಸರ್ಕಾರ ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಆರಂಭದಲ್ಲೇ ಎಡವಿದೆ. ವಿದೇಶದಿಂದ ಬಂದವರನ್ನ ವಿಮಾನ ನಿಲ್ದಾಣದಲ್ಲೇ ಟೆಸ್ಟ್ ಮಾಡಿಸಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಿ ಮನೆಗಳಿಗೆ ಬಿಡಬೇಕಿತ್ತು. ಅದು ಮಾಡದೆ ಉಡಾಫೆ ಮಾಡಿದ್ದಲ್ಲದೇ, ಸಮರ್ಪಕ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಸದ್ಯ ವೈದ್ಯರಿಗೆ ಪಿಪಿಇ ಕಿಟ್ ಹಾಗೂ ಮಾಸ್ಕ್ ಸಹ ನೀಡುತ್ತಿಲ್ಲ ಎಂದು ಆರೋಪಿಸಿದರು.
7 ಕೆಜಿ ಕೊಡುತ್ತಿದ್ದ ಅಕ್ಕಿಯನ್ನ 2 ತಿಂಗಳು ಎಂದು 5-5 ಅಂತ 10 ಕೆಜಿ ಕೊಟ್ರೆ ಸಾಕಾಗುತತಾ? ಅಕ್ಕಿ ಗೋಧಿ ಜೊತೆಗೆ ಎಣ್ಣೆ ಬೇಳೆ ಬೇರೆ ಪದಾರ್ಥಗಳು ಕೊಡೋದು ಬೇಡವಾ? ಲಾಕ್ಡೌನ್ ಎಂದು ಜನ ಮನೆಯಲ್ಲೇ ಇರಿ ಅಂತೀರಿ ಆಚೆ ಬಂದರೆ ಪೊಲೀಸರು ಹೊಡಿತಾರೆ. ಹೀಗಿದ್ದಾಗ ಜನ ಬದುಕುವುದು ಹೇಗೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.