ಚಿಕ್ಕಬಳ್ಳಾಪುರ: ಸರ್ಕಾರಿ ಅಧಿಕಾರಿಯ ಕೊರಳಪಟ್ಟಿಗೆ ಕೈ ಹಾಕಿದ ದಲಿತ ಮುಖಂಡರು ಹಲ್ಲೆ ನಡೆಸಲು ಮುಂದಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಸಭೆಯಲ್ಲಿ ನಡೆದಿದೆ.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದನಾರಾಯಣಸ್ವಾಮಿ ಕೆಲ ಮುಖಂಡರು ಹಲ್ಲೆಗೆ ಮುಂದಾಗಿದ್ದರು. ವಾಲ್ಮೀಕಿ ಜಯಂತಿ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಯನ್ನು ದಲಿತ ಮುಖಂಡರು ಎಳೆದಾಡಿದ್ದಾರೆ. ಚಿಂತಾಮಣಿ ತಾಲೂಕು ಸ್ವಾರಪ್ಪಲ್ಲಿ ಬಳಿ 3 ವರ್ಷಗಳ ಹಿಂದೆ ವಾಲ್ಮೀಕಿ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೇರವೇರಿಸಲಾಗಿತ್ತು. ದರೆ 3 ವರ್ಷಗಳಾದರೂ ವಾಲ್ಮೀಕಿ ಭವನ ಇನ್ನೂ ನಿರ್ಮಾಣವಾಗಿಲ್ಲ ಯಾಕೆ ಎಂದು ದಲಿತ ಮುಖಂಡರು ಸಿದ್ದನಾರಾಯಣಸ್ವಾಮಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಮಾತಿನ ಚಕಮಕಿ ನಡೆದು ಕೆಲ ದಲಿತ ಮುಖಂಡರು ಏಕಾಏಕಿ ಸಿದ್ದನಾರಾಯಣಸ್ವಾಮಿ ಮೇಲೆ ಮುಗಿಬಿದ್ದು ಕೊರಳಪಟ್ಟಿಗೆ ಕೈ ಹಾಕಿ ಎಳೆದಾಡಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳು ಆಕ್ರೋಶಿತ ದಲಿತ ಮುಖಂಡರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸದ್ಯ ಈ ಸಂಬಂಧ ಸಿದ್ದನಾರಾಯಣಸ್ವಾಮಿ ಪೊಲೀಸರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.