ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲ ಅಂತ ಅದೇ ರಸ್ತೆಗೆ ಮೂರು ಬಾರಿ ಬಿಲ್ ಮಾಡಿರೋ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ದುಡ್ಡನ್ನು ತಿಂದು ತೇಗಿದ್ದಾರೆ. ಆದರೆ ಜನ ಮಾತ್ರ ಅದೇ ಕಲ್ಲು ಮಣ್ಣಿನ ಹಾದಿಯಲ್ಲಿ ಓಡಾಡುವಂತಾಗಿದೆ.
ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪುಲಿಗಲ್ ಗ್ರಾಮ ಪಂಚಾಯತಿಯಿಂದ ರಾಮನಪಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ 10-15 ವರ್ಷಗಳಿಂದ ಕಲ್ಲು ಮಣ್ಣನಿಂದ ನಿರ್ಮಾಣವಾದ ಈ ರಸ್ತೆ ಇಂದಿಗೂ ಅದೇ ಸ್ಥಿತಿಯಲ್ಲೇ ಇದೆ. ಆದರೆ ಈ ರಸ್ತೆ ಅಭಿವೃದ್ಧಿ ಹೆಸರಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ತಿಂದು ತೇಗಿ ಅಭಿವೃದ್ಧಿಯಾಗಿದ್ದಾರೆ.
ಅಂದಹಾಗೆ ಪುಲಿಗಲ್ ಕ್ರಾಸ್ ನಿಂದ ರಾಗಿಮಾಕಲಪಲ್ಲಿ ರಸ್ತೆ ಅಭಿವೃದ್ಧಿ ಎಂದು 2 ಲಕ್ಷ 38 ಸಾವಿರ ರೂ. ಬಿಲ್ ಮಾಡಲಾಗಿದೆ. ರಾಮನಪಡಿ ರಸ್ತೆಯಿಂದ ಊದವಾರಪಲ್ಲಿ ಕ್ರಾಸ್ವರೆಗೂ ರಸ್ತೆ ಅಭಿವೃದ್ಧಿ ಎಂದು 4 ಲಕ್ಷ 60 ಸಾವಿರ ರೂ. ಬಿಲ್ ಆಗಿದ್ದರೆ, ರಾಮನಪಡಿ ಹತ್ತಿರ ಶಿವಪುರಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಎಂದು 4 ಲಕ್ಷದ 90 ಸಾವಿರ ರೂಪಾಯಿ ಬಿಲ್ ಮಾಡಲಾಗಿದೆ. ಆಸಲಿಗೆ ಈ ಮೂರೂ ರಸ್ತೆಗಳು ಸಹ ಒಂದೇ ರಸ್ತೆಯಾಗಿದ್ದು ಬೇರೆ ಬೇರೆ ಗ್ರಾಮಗಳ ಹೆಸರು ನಮೂದಿಸಿ ಬಿಲ್ ಮಾಡಲಾಗಿದೆ.
ಪುಲಿಗಲ್ ಕ್ರಾಸ್ ನಿಂದ ರಾಮನಪಡಿ ಗ್ರಾಮದವರೆಗೂ ಸರಿಸುಮಾರು 3 ಕಿಲೋಮೀಟರ್ ದೂರದ ಈ ಮಣ್ಣಿನ ರಸ್ತೆ ಅಭಿವೃದ್ಧಿ ಮಾಡಿದ್ದೀವಿ ಎಂದು ಮೂರು ಬಾರಿ ಲಕ್ಷ ಲಕ್ಷ ಬಿಲ್ ಮಾಡಲಾಗಿದೆ. ಆದರೆ ಪ್ರತ್ಯಕ್ಷವಾಗಿ ನೋಡಿದರೆ ರಸ್ತೆಯ ಅಭಿವೃದ್ಧಿ ಅನ್ನೋದು ಇಲ್ಲ. ಇನ್ನೂ ಇದೇ ರಸ್ತೆ ಕಥೆಯಾದರೆ ವೆಂಕಟರೆಡ್ಡಿಪಲ್ಲಿ ಗ್ರಾಮದ ಸೋಮ್ಲನಾಯಕ್ ಮನೆಯಿಂದ ನಾರಾಯಣ ನಾಯಕ್ ಮನೆಯವರೆಗೂ ಚರಂಡಿ ಮಾಡಿದ್ದೀವಿ ಎಂದು 4 ಲಕ್ಷ 91 ಸಾವಿರ ರೂಪಾಯಿ ಬಿಲ್ ಮಾಡಿಕೊಳ್ಳಲಾಗಿದೆ. ಆದರೆ ಪ್ರತ್ಯಕ್ಷವಾಗಿ ಪರಿಶೀಲನೆ ನಡೆಸಿದರೆ ಅಲ್ಲಿ ಚರಂಡಿಯೇ ಇಲ್ಲ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ನ ಸಿಎಂಜಿಎಸ್ವೈ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಗುತ್ತಿಗೆದಾರರ ಜೊತೆ ಶಾಮೀಲಾಗಿ ಜನರ ಲಕ್ಷ ಲಕ್ಷ ದುಡ್ಡನ್ನು ತಿಂದು ತೇಗಿದ್ದಾರೆ.