ಚಿಕ್ಕಬಳ್ಳಾಪುರ: ಬುಧವಾರ ನಡೆಯಲಿದ್ದ ಮದುವೆಗಾಗಿ ಕಲ್ಯಾಣ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.
ರೆಡ್ಡಿಗೊಲ್ಲವಾರಹಳ್ಳಿ ನಿವಾಸಿ ಗೋಪಿನಾಥ್ (50) ಮೃತ ದುರ್ದೈವಿ. ಪೇರೇಸಂದ್ರ ಗ್ರಾಮದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಆರತಕ್ಷತೆ ನಿಗದಿಯಾಗಿತ್ತು. ಹೀಗಾಗಿ ಗೋಪಿನಾಥ್ ಕಲ್ಯಾಣ ಮಂಟಪದಲ್ಲಿದ್ದ ನೇಮ್ ಬೋರ್ಡ್ ಗೆ ಹೂವಿನಿಂದ ಅಲಂಕಾರ ಮಾಡುತ್ತಿದ್ದರು.
ಬೋರ್ಡ್ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗೋಪಿನಾಥ್ ಅವರು ಸ್ಪರ್ಶಿಸಿದ್ದು, ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಲೆಗೆ ಬಲವಾಗಿ ಪೆಟ್ಟುಬಿದ್ದಿದ್ದು, ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಗೋಪಿನಾಥ್ ಮೃತಪಟ್ಟಿದ್ದಾರೆ.
ಈ ಸಂಬಂಧ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಅದೇ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv