ಬೆಂಗಳೂರು: ರಾಜ್ಯದಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರಕೃತಿ ವಿಕೋಪ ತಲೆದೋರಿರುವ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಆನ್ಲೈನ್ ಸಭೆ ನಡೆಸಿದ್ರು.
14 ಜಿಲ್ಲೆಗಳ ಡಿಸಿಗಳು, ಜಿ.ಪಂ. ಸಿಇಓಗಳು ಪಾಲ್ಗೊಂಡಿದ್ರು. ಸಿಎಂ ಮಳೆ ಹಾನಿ ಕುರಿತು ಮಾಹಿತಿ ಪಡೆದ್ರು. ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಹಲವು ಸೂಚನೆ ನೀಡಿದ್ರು. ವಿಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಕಳೆದ ಮೂರ್ನಾಲ್ಕು ದಿನಗಳಿಂದ ಕಾವಳಿ, ಮಲೆನಾಡು, ಬಯಲುಸೀಮೆ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಅಂದ್ರು.
13 ಜಿಲ್ಲೆಗಳಲ್ಲಿ ಮಳೆ ಹಾನಿ ಸಂಭವಿಸಿದ್ದು, ಈವರೆಗೂ 12 ಜನ, 62 ಜಾನುವಾರು ಸಾವನ್ನಪ್ಪಿವೆ ಎಂದು ಲೆಕ್ಕ ಹೇಳಿದ್ರು. ಕಳೆದ ಸಲ ಭೂಕುಸಿತ ಆಗಿದ್ದ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಕೆಲವು ಕಡೆ ಭೂ ಕುಸಿದು ರಸ್ತೆಗಳ ಮೇಲೆ ಬಂದಿದೆ. ಮನೆಗಳಿಗೆ ನೀರು ಹೋದರೆ ಹತ್ತು ಸಾವಿರ ಕೊಡಲು ಸೂಚಿಸಲಾಗಿದೆ. ಡಿಸಿಗಳಿಗೆ ವರದಿಕೊಡಲು ತಿಳಿಸಲಾಗಿದೆ. ವರದಿ ಬಂದ ಮೇಲೆ ಮತ್ತಷ್ಟು ಪರಿಹಾರ ಕ್ರಮಗಳ ಘೋಷಣೆ ಮಾಡಲಾಗುವುದು. ಮಳೆ ನಿಂತ ಮೇಲೆ ಬೆಳೆ ಹಾನಿ ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ರಸ್ತೆಗಳ ಹಾನಿಯ ವರದಿ ಕೇಳಿದ್ದೇನೆ ಎಂದರು. ಇದನ್ನೂ ಓದಿ: ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – IAS ಅಧಿಕಾರಿ ಅಮಾನತು
ವಿದ್ಯುತ್ ಕಂಬಗಳ ದುರಸ್ತಿಗೆ ಆದೇಶ ಮಾಡಲಾಗಿದೆ. ಕಡಲ ಕೊರೆತಕ್ಕೆ ಎರಡು ಪ್ರಕಾರದ ಪರಿಹಾರ ಸೂಚಿಸಲಾಗಿದೆ. ತಾತ್ಕಾಲಿಕ ಪರಿಹಾರ ಮತ್ತು ಶಾಶ್ವತ ಪರಿಹಾರ ವಿಶೇಷ ತಂತ್ರಜ್ಞಾನ ಬಳಸಿ ಮಾಡಲಾಗುತ್ತೆ. ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮಾಡಲು ಸೂಚಿಸಲಾಗಿದೆ. ಕಂದಾಯ, ಪೊಲೀಸ್, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳಿಗೆ ಸ್ಥಳದಲ್ಲಿ ಪರಿಹಾರ ಕಾರ್ಯ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: 1 ರಿಂದ 10ನೇ ತರಗತಿ ಮಕ್ಕಳಿಗೆ ಶೂ ಭಾಗ್ಯ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಪ್ರಕಟಿಸಿದೆ. ಬೆಳಗಾವಿ, ಕಲಬುರಗಿ, ಬೀದರ್ನಲ್ಲಿ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಅಂದ ಹಾಗೇ, ಜುಲೈ ತಿಂಗಳ ಮೊದಲ 8 ದಿನದಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 94ರಷ್ಟು ಹೆಚ್ಚು ಮಳೆಯಾಗಿದೆ.