ಬೆಂಗಳೂರು: ಶಾಸಕ ಬಸವರಾಜ ದಡೇಸುಗೂರು ಮೇಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ಗರಂ ಆಗಿದ್ದಾರೆ.
ತಮ್ಮ ಮೇಲಿನ ಆರೋಪ, ಸೋಮವಾರ ಪ್ರಿಯಾಂಕ್ ಖರ್ಗೆ (Priyank Kharge), ತಂಗಡಗಿ ಬಿಡುಗಡೆ ಮಾಡಿದ ವೀಡಿಯೋ ಕುರಿತು ಚರ್ಚೆ ನಡೆಸಲು ಶಾಸಕರು ಇಂದು ಸಿಎಂ ಭೇಟಿಯಾದರು.
ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾದ ದಡೇಸುಗೂರು (Basavaraj Dadesaguru), ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ಕೊಟ್ಟರು. ಇದು ಕಾಂಗ್ರೆಸ್ (Congress) ಷಡ್ಯಂತ್ರ, ಈಸಲ ಸೋಲಿಸಲು ತಂಗಡಗಿ ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ. ಶಾಸಕರ ಸ್ಪಷ್ಟನೆ ಕೇಳಿದ ಬಳಿಕ ದಡೇಸುಗೂರು ಮೇಲೆ ಸಿಎಂ ಗರಂ ಆದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ದಡೇಸುಗೂರುಗೆ ಸಿಎಂ ಸಖತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಪಿಎಸ್ಐ ಅಕ್ರಮ ಆರೋಪ ಪ್ರಕರಣದಲ್ಲಿ ಈಗಾಗಲೇ ಸರ್ಕಾರಕ್ಕೆ ಮುಜುಗರ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ದಡೆಸುಗೂರು ಮೇಲೆ ಗರಂ ಆಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಿಎಸ್ಐ ಹಗರಣ: ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ: ಬಸವರಾಜ ದಡೇಸಗೂರು
ಏನಿದು ಆರೋಪ..?: ಪಿಎಸ್ಐ ಪ್ರಕರಣ ಸಂಬಂಧ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರ್ ಆಡಿಯೋ ಈ ಹಿಂದೆ ವೈರಲ್ ಆಗಿತ್ತು. ಪಿಎಸ್ಐ ಮಾಡಿಸ್ತೀನಿ ಎಂದು 15 ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪವನ್ನು ದಡೇಸೂಗೂರ್ ಎದುರಿಸುತ್ತಿದರು. ನಿವೃತ್ತ ಪೊಲೀಸ್ ಕಾನ್ಸ್ ಟೇಬಲ್ ಪರಸಪ್ಪ ಎಂಬುವವರ ಮಗನ ನೇಮಕಾತಿಗೆ ಹಣ ಪಡೆದಿದ್ದನ್ನು, ಸರ್ಕಾರಕ್ಕೆ ಆ ಹಣ ತಲುಪಿಸಿದ್ದೇನೆ ಎಂಬುದನ್ನು ಶಾಸಕರು ಫೋನ್ (Phone Call) ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದ ಆಡಿಯೋ ವೈರಲ್ ಆಗಿತ್ತು.
ದಡೇಸುಗೂರು ಹೇಳಿದ್ದೇನು..?: ನಾನು ತಪ್ಪು ಮಾಡಿಲ್ಲ. ಆಡಿಯೋಗಳನ್ನು ಎಡಿಟ್ ಮಾಡಿ ಸುಳ್ಳು ಆರೋಪ ಹೊರಿಸಲಾಗಿದೆ. ರಾಜಕೀಯವಾಗಿ ದ್ವೇಷ ಸಾಧಿಸುತ್ತಿದ್ದಾರೆ. ಪಿಎಸ್ಐ ಕುರಿತಾಗಿ ಅಲ್ಲ. ನಾನು ಈ ಹಿಂದೆ ರಾಜಿ ಪಂಚಾಯಿತಿ ಸಂಬಂಧ ಮಾತನಾಡಿದ್ದೆ, ಅದು ಹಳೆಯ ಆಡಿಯೋ ಅದನ್ನು ಎಡಿಟ್ ಮಾಡಿ ಇದೀಗ ಹರಿಬಿಡಲಾಗಿದೆ. ನನ್ನ ಬಳಿ ಎಲ್ಲಾ ದಾಖಲೆಗಳಿವೆ. ನಿವೃತ್ತ ಪೊಲೀಸ್ ಕಾನ್ಸ್ ಟೇಬಲ್ ಪರಪಪ್ಪನ ಮಗ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ ಮತ್ತೆ ಹೇಗೆ ಪರೀಕ್ಷೆ ಬರೆಯಲು ಸಾಧ್ಯ? ನಾನು ದಾಖಲೆ ಸಮೇತ ಸದನಕ್ಕೆ ಬಂದಿದ್ದೇನೆ. ಸಿಡಿ ಕೂಡ ತಂದಿದ್ದೇನೆ ಎಂದು ತಿಳಿಸಿದ್ದಾರೆ.