ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ (Dawood Ibrahim) ಆರೋಗ್ಯದ ಬಗ್ಗೆ ಆತನ ಆಪ್ತ ಛೋಟಾ ಶಕೀಲ್ (Chhota Shakeel) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ.
ದಾವೂದ್ಗೆ ಯಾರೋ ವಿಷ ನೀಡಿದ್ದಾರೆ ಅನ್ನೋದು ಆಧಾರರಹಿತ ವದಂತಿಯಾಗಿದೆ. ದಾವೂದ್ ನೂರಕ್ಕೆ ನೂರಷ್ಟು ಆರೋಗ್ಯವಾಗಿದ್ದಾನೆ. ಕಾಲಕಾಲಕ್ಕೆ ದುರುದ್ದೇಶದಿಂದ ಇಂತಹ ವದಂತಿಗಳನ್ನು ಹರಡಲಾಗುತ್ತಿದೆ. ಇದೀಗ ಐಎಸ್ಐನ ಆಸ್ತಿಯಾಗಿರುವ ಪರಾರಿಯಾಗಿರುವ ಭೂಗತ ದೊರೆ, ತಾನು ಇತ್ತೀಚೆಗೆ ಪಾಕಿಸ್ತಾನದಲ್ಲಿ ದಾವೂದ್ನನ್ನು ಭೇಟಿಯಾಗಿದ್ದೆ ಮತ್ತು ಅವನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ಛೋಟಾ ಶಕೀಲ್ ಹೇಳಿದ್ದಾನೆ.
ದಾವೂದ್ಗೆ ಯಾರೋ ವಿಷ ಹಾಕಿದ್ದಾರೆ. ಆತನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವದಂತಿಗಳು ಭಾರತ ಮತ್ತು ಪಾಕಿಸ್ತಾನದ ಎರಡೂ ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಆತನ ಆಪ್ತ ಛೋಟಾ ಶಕೀಲ್ ಕಡೆಯಿಂದ ಸ್ಫೋಟಕ ಮೆಸೇಜ್ ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ದಾವೂದ್ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪಾಕಿಸ್ತಾನದಲ್ಲಿ (Pakistan) ಗೂಗಲ್ ಮತ್ತು ಟ್ವಿಟ್ಟರ್ ಕೂಡ ಸ್ಥಗಿತಗೊಳಿಸಲಾಗಿತ್ತು.
ಛೋಟಾ ಶಕೀಲ್ನನ್ನು ದಾವೂದ್ನ ಬಲಗೈ ಬಂಟ ಎಂದು ಕರೆಯಲಾಗುತ್ತದೆ. ದಾವೂದ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ. ದರೋಡೆ, ಡಕಾಯಿತಿ, ಕಳ್ಳಸಾಗಣೆ, ಸುಲಿಗೆ, ಅಪಹರಣ ಮತ್ತು ಬಾಂಬ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಾವೂದ್ ಇಬ್ರಾಹಿಂ ಕೈವಾಡವಿದೆ. ಅಷ್ಟೇ ಅಲ್ಲದೆ, 1993 ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಇದೇ ಪಾತಕಿ. ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.