-ಛತ್ತೀಸ್ಗಢದಲ್ಲಿ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
ಬೆಂಗಳೂರು: ಮಧ್ಯಪ್ರದೇಶದಂತೆ ಛತ್ತೀಸ್ಗಡದಲ್ಲೂ ಪರಿಸ್ಥಿತಿ ಬಹುತೇಕ ಒಂದೇ ರೀತಿಯಾಗಿದೆ. ಇಲ್ಲಿಯೂ ಸಹ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಬಿಗ್ ಸ್ಪರ್ಧೆ ಸಾಕಷ್ಟು ಕುತೂಹಲ ಮೂಡಿಸಿದೆ. ಒಟ್ಟು 90 ವಿಧಾನಸಭಾ ಕ್ಷೇತ್ರಗಳಿರುವ ಛತ್ತೀಸ್ಗಡದಲ್ಲಿ 46 ಕ್ಷೇತ್ರ ಗೆದ್ದ ಪಕ್ಷ ಅಧಿಕಾರಕ್ಕೇರಲಿದೆ.
ಕಾಂಗ್ರೆಸ್ ತೊರೆದಿರುವ ಪ್ರಮುಖ ನಾಯಕ ಅಜಿತ್ ಜೋಗಿ ಛತ್ತೀಸ್ಗಡದಲ್ಲಿ ಪ್ರಮುಖ ಬದಲಾವಣೆಗೆ ನಾಂದಿ ಹಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಜೋಗಿ ತಮ್ಮ ಜನತಾ ಕಾಂಗ್ರೆಸ್ ಛತ್ತೀಸ್ಗಡ ಪಕ್ಷವನ್ನು ಮಾಯಾವತಿಯ ಬಿಎಸ್ಪಿ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದಾರೆ. ಹಾಲಿ ಸಿಎಂ ಬಿಜೆಪಿಯ ರಮಣ್ಸಿಂಗ್ ಮೂರು ಬಾರಿ ಅಧಿಕಾರ ನಡೆಸಿದ್ದು ಈ ಬಾರಿ ರಮಣ್ ಸಿಂಗ್ಗೆ ಅಧಿಕಾರ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಛತ್ತೀಸ್ಗಢ ಒಟ್ಟು 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 2013ರ ವಿಧಾನಸಭಾ ಚುನವಾಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39, ಬಿಎಸ್ಪಿ 01 ಮತ್ತು ಇತರೆ 01 ಕ್ಷೇತ್ರಗಳಲ್ಲಿ ಗೆಲುವುದ ಸಾಧಿಸಿತ್ತು. ಬಿಜೆಪಿ ಶೇ.41.04, ಕಾಂಗ್ರೆಸ್ ಶೇ.40.29, ಬಿಎಸ್ಪಿ ಶೇ.4.27 ಮತ್ತು ಇತರೆ ಶೇ.14.4 ರಷ್ಟು ಮತಗಳನ್ನು ಪಡೆದುಕೊಂಡಿದ್ದವು.
* ಛತ್ತೀಸ್ಗಢದಲ್ಲಿ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
ಛತ್ತೀಸ್ಗಢದಲ್ಲಿ ಸತತ ಮೂರು ಬಾರಿ ಬಿಜೆಪಿ ರಮಣ್ ಸಿಂಗ್ ಅವರ ಆಡಳಿತ ನಡೆಸಿದ್ದಾರೆ. ಆದ್ರೆ ಚುನಾವಣೆ ಹೊತ್ತಲ್ಲಿ ನಿರಂತರ ನಕ್ಸಲರ ಹಿಂಸಾಚಾರ ಹೆಚ್ಚಾಗಿತ್ತು. ನಕ್ಸಲ್ ಪರ ಉತ್ತರಪ್ರದೇಶ ಕಾಂಗ್ರೆಸ್ ನಾಯಕ ರಾಜ್ಬಬ್ಬರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನೇ ಪ್ರಧಾನಿ ಮೋದಿ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಅಜಿತ್ ಜೋಗಿ ಕಾಂಗ್ರೆಸ್ನಿಂದ ಹೊರಬಂದು ಜನತಾ ಕಾಂಗ್ರೆಸ್ ಎಂಬ ಹೊಸ ಪಕ್ಷ ಸ್ಥಾಪನೆ ಮಾಡಿದರು. ಕಾಂಗ್ರೆಸ್ಗೆ ಶಾಕ್ ಕೊಟ್ಟು ಜೋಗಿ ಜೊತೆ ಬಿಎಸ್ಪಿ ನಾಯಕಿ ಮಾಯಾವತಿ ಅವರ ಜೊತೆ ಕೈ ಜೋಡಿಸಿದ್ದರು.
ಬಿಎಸ್ಪಿ+ಜೋಗಿ ಪಾಳಯ ಬರೋಬರಿ 30 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಬೀರೋ ನಿರೀಕ್ಷೆಗಳಿವೆ ಎಂಬ ಲೆಕ್ಕಾಚಾರ ರಾಜಕೀಯ ಅಂಗಳದಲ್ಲಿದೆ. ಬಿಎಸ್ಪಿಯ ಶೇಕಡಾ 2-3ರಷ್ಟು, ಜೋಗಿ ಪಕ್ಷ 2-3ರಷ್ಟು ಮತಗಳ ಕ್ರೂಢೀಕರಣ ಆಗುವು ಸಾಧ್ಯತೆಗಳಿದ್ದು, ಇದು ನೇರವಾಗಿ ಬಿಜೆಪಿ-ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುತ್ತೆ ಎಂಬ ಲೆಕ್ಕಾಚಾರಗಳಿವೆ.
ಗುಡ್ಡಗಾಡು ರಾಜ್ಯದಲ್ಲಿ ಕಾಂಗ್ರೆಸ್ಗೆ ಪ್ರಬಲ ಸಿಎಂ ಮುಖವಿಲ್ಲ. ರಾಜ್ಯದ 11 ಲೋಕಸಭಾ ಕ್ಷೇತ್ರಗಳಲ್ಲಿ 10ರಲ್ಲಿ ಬಿಜೆಪಿ, ಒಂದಷ್ಟೇ ಕಾಂಗ್ರೆಸ್ ಕೈಯಲ್ಲಿದೆ. ‘ಚಾವಲ್ ವಾಲೆ ಬಾಬಾ’ ಎಂಬ ಪ್ರಸಿದ್ಧಿಯ ರಮಣ್ ಸಿಂಗ್ ವಿರುದ್ಧ ರೈತಾಪಿ ವರ್ಗದ ಆಕ್ರೋಶ ವ್ಯಕ್ತವಾಗಿದೆ. ಬೆಲೆ ಏರಿಕೆ, ಕೃಷಿ ಉತ್ಪನ್ನಗಳ ಬೆಲೆಗಳ ಕುಸಿತವೂ ಪ್ರಮುಖ ವಿಷಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಬೆಂಬಲ ಬೆಲೆಯನ್ನ ಹತ್ತು ಪಟ್ಟು ಹೆಚ್ಚಳ ಮಾಡುವ ವಾಗ್ದಾನ ಮಾಡಿದೆ. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹತ್ತೇ ದಿನದಲ್ಲಿ ರೈತರ ಸಾಲ ಮನ್ನಾ ಮಾಡ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv