ರಾಯಪುರ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಛತ್ತಿಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರ ಉಪ ಕಾರ್ಯದರ್ಶಿ ಸೌಮ್ಯಾ ಚೌರಾಸಿಯಾ (Saumya Chaurasia) ಅವರನ್ನ ಶುಕ್ತವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ.
ಸೌಮ್ಯಾ ಅವರನ್ನು ಬಂಧಿಸಿದ ಬಳಿಕ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಯಿತು. ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಬೆಂಗಾವಲಿನಲ್ಲಿ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಇದನ್ನೂ ಓದಿ: ಶ್ರದ್ಧಾ ಬಿಟ್ಟು ಹೋಗುವ ಆತಂಕದಲ್ಲಿ ಹತ್ಯೆ ಮಾಡಿದೆ – ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಮತ್ತೊಮ್ಮೆ ತಪ್ಪೊಪ್ಪಿಗೆ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ನಲ್ಲಿ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಭಾರತ ಆಡಳಿತ ಸೇವೆಯ (IAS) ಅಧಿಕಾರಿ ಸಮೀರ್ ವಿಷ್ಣೋಯ್ ಹಾಗೂ ಇತರ ಇಬ್ಬರನ್ನು ಬಂಧಿಸಿತ್ತು.
ಆದಾಯ ತೆರಿಗೆ ಇಲಾಖೆ ನೀಡಿದ್ದ ದೂರಿನ ಅನ್ವಯ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಆರಂಭಿಸಿತ್ತು. ಛತ್ತಿಸ್ಗಢದಿಂದ ಸಾಗಾಣಿಕೆ ಮಾಡುವ ಪ್ರತಿ ಟನ್ ಕಲ್ಲಿದ್ದಲಿನ ಮೇಲೆ ಟನ್ಗೆ 25 ರೂ. ಅಕ್ರಮ ಚಂದಾ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಇದರಲ್ಲಿ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಲೂಧಿಯಾನ ಕೋರ್ಟ್ ಸ್ಫೋಟದ ಆರೋಪಿ, ಭಯೋತ್ಪಾದಕ ಹರ್ಪ್ರೀತ್ ಸಿಂಗ್ ಬಂಧನ
ಸೌಮ್ಯಾ ಅವರ ಮನೆಯ ಮೇಲೆ 2020ರಲ್ಲಿಯೂ ದಾಳಿ ನಡೆದಿತ್ತು. ಆಗ ಕೇಂದ್ರ ಸರ್ಕಾರವು ರಾಜಕೀಯ ಸೇಡು ತೀರಿಸಿಕೊಳ್ಳಲು ಸಂಸ್ಥೆ ಮೂಲಕ ದಾಳಿ ನಡೆಸಿದೆ ಎಂದು ಬಘೇಲ್ ಆರೋಪಿಸಿದ್ದರು.